ಗುಂಡ್ಲುಪೇಟೆ: ‘ಬಂಡೀಪುರ ಅಭಯಾರಣ್ಯವನ್ನು ಸಂಭವನೀಯ ಬೆಂಕಿ ಅನಾಹುತದಿಂದ ರಕ್ಷಿಸುವ ಸಲುವಾಗಿ ‘ಬೆಂಕಿ ರೇಖೆ’ಗಳನ್ನು ಮಾಡಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಹನುಮಂತಪ್ಪ ಮಂಗಳವಾರ ತಿಳಿಸಿದ್ದಾರೆ. ಮಂಗಳವಾರ ‘ಪ್ರಜಾವಾಣಿ’ ಯೊಂದಿಗೆ ಮಾತ ನಾಡಿ, ಬಂಡೀಪುರ ರಾಷ್ಟ್ರೀಯ ಉದ್ಯಾನವನ ತಮಿಳುನಾಡು ಹಾಗೂ ಕೇರಳ ಗಡಿಯುದ್ದಕ್ಕೂ 900 ಚ.ಕಿ.ಮೀ. ವ್ಯಾಪಿಸಿದೆ.
ರಾಜ್ಯದಲ್ಲಿ ಗುಂಡ್ಲುಪೇಟೆ, ನಂಜನಗೂಡು ಹಾಗೂ ಎಚ್.ಡಿ. ಕೋಟೆ ತಾಲ್ಲೂಕು ಒಳಗೊಂಡಿದೆ.ಇದನ್ನು ಆಡಳಿತಾತ್ಮಕ ವಾಗಿ 12 ವಲಯಗಳಾಗಿ ವಿಂಗಡಿಸಿದ್ದು, ಈ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಬೆಂಕಿ ರೇಖೆ(ಫೈರ್ಲೈನ್) ಗಳನ್ನು ಮಾಡಲಾಗಿದೆ. ಇದರಿಂದ ಆಕಸ್ಮಿಕ ಬೆಂಕಿ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಬೆಂಕಿಯಿಂದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಸಂಕುಲ ಸಂರಕ್ಷಿ ಸುವ ಸಲುವಾಗಿ ಈಗಾಗಲೇ ಇಲಾಖೆ ಹಾಗೂ ಖಾಸಗಿ ರೆಸಾರ್ಟ್ಗಳ ಮಾಲಿಕರ ಸಭೆಯಲ್ಲಿ ಮಾಹಿತಿ ನೀಡಲಾಗಿದೆ. ನಾಗರಿಕರು ಇಲಾಖೆ ಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರವೇಶ ಶುಲ್ಕದಲ್ಲಿ ಹೆಚ್ಚಳ: ಬಂಡೀಪುರದಲ್ಲಿ ಸಫಾರಿ ಮಾಡುವ ಪ್ರವಾಸಿಗರು ಹೆಚ್ಚಿನ ಶುಲ್ಕ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶುಲ್ಕವನ್ನು ತಲಾ 60ರಿಂದ 200 ರೂ.ಗೆ ಹಾಗೂ 35 ರೂ. ನಿಂದ 100 ರೂ.ಗಳಿಗೆ ಅಂದರೆ ಪ್ರತಿಯೊಬ್ಬರು ರೂ. 300 ಕೊಡಬೇಕಿದೆ. ವಿದೇಶಿಗರಿಗೆ ಹಿಂದೆ ಪ್ರವೇಶ ಶುಲ್ಕ ರೂ. 200 ಹಾಗೂ ಸಫಾರಿ ಶುಲ್ಕ ರೂ. 35 ಅನ್ನು ಇದ್ದದ್ದನ್ನು ಪ್ರವೇಶ ಶುಲ್ಕ 1,000 ಹಾಗೂ ಸಫಾರಿ ಶುಲ್ಕ ರೂ. 1,100 ರೂ. ನಿಗದಿ ಮಾಡಲಾಗಿದೆ.
ಸಫಾರಿ ರದ್ದು: ಅಂತಿಮ ತೀರ್ಮಾನ ಆಗಿಲ್ಲ
ಬಂಡೀಪುರ ಅರಣ್ಯದಲ್ಲಿ ಪ್ರವಾಸಿಗರ ಸಫಾರಿ ಮುಂದುವರಿಸಲಾಗಿದೆ. ಇಲಾಖೆಯ ಉನ್ನತ ಅಧಿಕಾರಿಗಳು ಶೀಘ್ರದಲ್ಲಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಅವರ ಮಾರ್ಗದರ್ಶನದ ಮೇರೆಗೆ ಸಂಜೆ ವೇಳೆಯ ಸಫಾರಿ ತಾತ್ಕಾಲಿಕವಾಗಿ ರದ್ದು ಮಾಡಲು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಈಗಾಗಲೇ ತಮಿಳುನಾಡು ಹಾಗೂ ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸಂಚಾರವನ್ನು ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ನಿರ್ಬಂಧಿಸಲಾಗಿದೆ. ಇವುಗಳ ತಪಾಸಣೆಗಾಗಿ ಎರಡೂ ಕಡೆಗಳಲ್ಲಿ ರಾತ್ರಿ ಗಸ್ತು ಹಾಕಾಲಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.