ಗುಂಡ್ಲುಪೇಟೆ: ತಾಲ್ಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ 9 ಕೋಟಿ ರೂ. ಮಂಜೂರಾಗಿದ್ದು, ಅತಿ ಶೀಘ್ರದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಎಸ್.ಮಹದೇವಪ್ರಸಾದ್ ಭಾನುವಾರ ಹೇಳಿದರು.
ತಾಲ್ಲೂಕಿನ ಮೂಡುಗೂರು ಗ್ರಾಮದಲ್ಲಿ 1.64 ಲಕ್ಷ ರೂ. ವೆಚ್ಚದಲ್ಲಿ ರಾಮನಾಥಪುರ-ತೆರಕಣಾಂಬಿ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವೀರನಪುರದಿಂದ ಬನ್ನೀತಾಳಪುರ, ಹಂಗಳದಿಂದ ಬೇರಂಬಾಡಿ ರಸ್ತೆಗಳಿಗೆ ತಲಾ 50 ಲಕ್ಷ ರೂ., ಗುಂಡ್ಲುಪೇಟೆಯ ಕೋಡಹಳ್ಳಿ ವೃತ್ತದಿಂದ ಶಿವಪುರ ರಸ್ತೆಗೆ 1.75 ಲಕ್ಷ ರೂ. ಬೇಗೂರಿನ ಬಂಡಿಗೆರೆ ಮಾದಪ್ಪನ ದೇವಸ್ಥಾನದಿಂದ ಕೌಲಂದೆ ರಸ್ತೆಗೆ 1.75 ಲಕ್ಷ ರೂ., ನಿಟ್ರೆಯಿಂದ ಹೆಮ್ಮರಗಾಲ ರಸ್ತೆಗೆ 1.50 ಲಕ್ಷ ರೂ., ಬೊಮ್ಮನಹಳ್ಳಿಯಿಂದ ಅರಕಲವಾಡಿ ರಸ್ತೆಗೆ 75 ಲಕ್ಷ ರೂ., ಕಬ್ಬಹಳ್ಳಿಯಿಂದ ಸಾಗಡೆ, ಬೆಟ್ಟದಪುರ ರಸ್ತೆಗೆ 3 ಕೋಟಿ ರೂ., ಕಬ್ಬಹಳ್ಳಿ-ಉಡಿಗಾಲ ರಸ್ತೆಗೆ 1 ಕೋಟಿ ರೂ.ಗೆ ಟೆಂಡರ್ ಆಗಿದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಹರವೆ ಹೋಬಳಿಯ ರಸ್ತೆಗಳಿಗೆ ಓ.ಆರ್.ಎಫ್. ಯೋಜನೆಯಡಿ 4 ಕೋಟಿ ರೂ. ನೀಡಲಾಗಿದೆ. ಕ್ಷೇತ್ರದಲ್ಲಿ ಬೇಸಿಗೆಯ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು 5 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.
ತೆರಕಣಾಂಬಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಮಹಾದೇವಪ್ಪ, ಕಬ್ಬಹಳ್ಳಿ ಕೆ.ಎಸ್. ಮಹೇಶ್, ಪಡುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಕೃಷಿ ಪತ್ತಿನ ಸಹಕಾರ ಬ್ಯಾಂಕ್ನ ಅಧ್ಯಕ್ಷ ಎಂ.ಪಿ. ಸುನಿಲ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪ್ರಕಾಶ್ ನಿಗೂಡಗಿ, ಗುತ್ತಿಗೆದಾರ ಶಾಂತಪ್ಪ, ಗೌಡಿಕೆ ನಾಗೇಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಜಯಪ್ಪ ಮುಂತಾದವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.