ADVERTISEMENT

ರಾಹುಲ್‌ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಕೊಳ್ಳೇಗಾಲದಲ್ಲಿ ಮಂಗಳವಾರ ನಡೆದ ಜೆಡಿಎಸ್‌–ಬಿಎಸ್‌ಪಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 11:04 IST
Last Updated 4 ಏಪ್ರಿಲ್ 2018, 11:04 IST
ಕೊಳ್ಳೇಗಾಲ ಮಂಗಳವಾರ ಸಂಜೆ ಜೆಡಿಎಸ್‌ ಸಮಾವೇಶಕ್ಕೂ ಮುನ್ನ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಚ್‌.ಡಿ.ಕುಮಾರಸ್ವಾಮಿ, ಮಹೇಶ್‌
ಕೊಳ್ಳೇಗಾಲ ಮಂಗಳವಾರ ಸಂಜೆ ಜೆಡಿಎಸ್‌ ಸಮಾವೇಶಕ್ಕೂ ಮುನ್ನ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಚ್‌.ಡಿ.ಕುಮಾರಸ್ವಾಮಿ, ಮಹೇಶ್‌   

ಕೊಳ್ಳೇಗಾಲ: ಪಾಪಾಪಾಂಡು ತರಹದ ವ್ಯಕ್ತಿಯನ್ನು ಕರೆತಂದು ಕಾಂಗ್ರೆಸ್ ಚುನಾವಣಾ ಪ್ರಚಾರ ನಡೆಸುತ್ತಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.ಇಲ್ಲಿ ಮಂಗಳವಾರ ಜೆಡಿಎಸ್‌ ಮತ್ತು ಬಿಎಸ್‌ಪಿ ಜೊತೆಗೂಡಿ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು. ಲೋಕಸಭೆಯಲ್ಲಿ ಗಂಭೀರವಾಗಿ ಚರ್ಚೆ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಮೊಬೈಲ್ ಹಿಡಿದುಕೊಂಡು ಪಾಪ ಪಾಂಡು ತರಹ ಗೇಮ್ ಆಡುತ್ತಾರೆ ಎಂದು ಅವರು ಆರೋಪಿಸಿದರು.ಬಿಜೆಪಿ ಅವರು ಅಮಿತ್ ಶಾ ಕರೆಸಿ ಪ್ರಚಾರ ಮಾಡುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಇವರು ರಾಜ್ಯಕ್ಕೆ ಬರಲಿಲ್ಲ. ಈಗ ವಿಧವೆಯರ ಮನೆಗೆ ಹೋಗಿ ಮುಷ್ಟಿ ಅಕ್ಕಿ ಕೊಡಿ ಅಂತಾರೆ ಎಂದು ಕಿಡಿಕಾರಿದರು.ಜೆಡಿಎಸ್ ಬಿಜೆಪಿ ಜತೆ ಕೈಜೋಡಿಸಿದೆ ಎಂದು ಹೇಳುವವರು ಹುಚ್ಚರು. ನಾವು ಕೈ ಜೋಡಿಸಿರುವುದು ಬಿಎಸ್‌ಪಿ ಜತೆ. ಒಳ ಒಪ್ಪಂದದ ಜರೂರು ನಮಗಿಲ್ಲ ಎಂದು ತಿರುಗೇಟು ನೀಡಿದರು.ರಾಜಕೀಯದಲ್ಲಿ ಕೃತಜ್ಞತೆ ಮತ್ತು ಕ್ಷಮಾಗುಣ ಮುಖ್ಯ ಆದರೆ ಇಂದು ಅಧಿಕಾರಕ್ಕಾಗಿ ಸಿದ್ದರಾಮಯ್ಯ ಎಲ್ಲವನ್ನೂ ಮರೆತ್ತಿದ್ದಾರೆ ಎಂದು ಹೇಳಿದರು.

ಸಿದ್ಧರಾಮಯ್ಯ ಜೆಡಿಎಸ್‌ನಲ್ಲಿದ್ದಾಗ ಅವರ ಗೆಲುವಿಗಾಗಿ ನಾನು ಮತ್ತು ರೇವಣ್ಣ ಮತದಾರರ ಮನೆ ಬಾಗಿಲಿಗೆ ಹೋಗಿದ್ದೇವೆ. ಅವರ ಗೆಲುವಿಗೆ ಕುರಿ, ಕೋಳಿಗಳನ್ನ ಮಾರಿದವರು ಇಂದು ಅವರ ಜೊತೆ ಇಲ್ಲ. ಇನ್ನು ನಿಮ್ಮ ಗೆಲುವಿಗಾಗಿ ಸದಾ ಶ್ರಮಿಸುತ್ತಿದ್ದ ರೇವಣ್ಣ ಇಂದು ನಿಮ್ಮ ಜೊತೆಗಿಲ್ಲ. ನಿಮ್ಮ ಅಹಂಕಾರದಿಂದ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೀರಾ ಎಂದು ಎಚ್ಚರಿಸಿದರು‌. ದೇಶದಲ್ಲಿ ಆಳ್ವಿಕೆ ನಡೆಸಿದ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಕುಟುಂಬದ ರಾಹುಲ್ ಗಾಂಧಿ ಅವರ ಬಾಯಲ್ಲಿ ಹೀನಾಯ ಮಾತುಗ ಳನ್ನಾಡಿಸುತ್ತಿರುವುದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಘನತೆಗೆ ತಕ್ಕದಲ್ಲ ಎಂದು ಎಂದರು.

150 ಬೈಕ್ ವಶ
ಜೆಡಿಎಸ್ ಸಮಾವೇಶದಲ್ಲಿ ಬಳಕೆ ಮಾಡಲಾಗಿದ್ದ 150 ಬೈಕ್ ಮತ್ತು 10 ಕಾರುಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಬೈಕ್ ರ‍್ಯಾಲಿಗೆ ಅನುಮತಿ ಪಡೆದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪೊಲೀಸ್ ಜೀಪಿನಲ್ಲಿ ಹಣ ಸಾಗಾಟ ನಿಲ್ಲಿಸಿ

ಕೊಳ್ಳೇಗಾಲ: ಪೊಲೀಸ್ ಜೀಪಿನಲ್ಲಿ ಹಣ ಸಾಗಾಟ ಮಾಡುವುದನ್ನು ಮೊದಲು ನಿಲ್ಲಿಸಿ ಎಂದು ಕುಮಾರಸ್ವಾಮಿ ಚುನಾವಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ದೂರದ ಊರಿನಿಂದ ಬರುವ ಕಾರ್ಯಕರ್ತರು, ಮತದಾರರು ಹೇಗೆ ಬರಲು ಸಾಧ್ಯ. ಅವರ ವಾಹನಗಳನ್ನು ಜಪ್ತಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರ ಚೇಲಗಳಾಗಿ ವರ್ತಿಸುವುದನ್ನು ನಿಲ್ಲಿಸಿ ಎಂದು ಗುಡುಗಿದರು.ಸಮಾವೇಶ ಮುಗಿಯುವುದರೊಳಗೆ ಕಾರ್ಯಕರ್ತರ ವಾಹನ ಬಿಟ್ಟರೇ ಸರಿ ಇಲ್ಲದಿದ್ದರೆ ನಾನೇ ಕಚೇರಿ ಬಳಿ ಬರುತ್ತೇನೆ ಎಂದು ಸಮಾವೇಶದಲ್ಲಿ ಎಚ್ಚರಿಕೆ ನೀಡಿದರು.

**

ಸಮಾಜ ಒಡೆಯುವ ಕೆಲಸ ಮಾಡಿದ ಸಿದ್ದರಾಮಯ್ಯ ಅವರಿಗೆ ವೀರಶೈವ ಮತ್ತು ಲಿಂಗಾಯತರು ತಕ್ಕ ಪಾಠ ಕಲಿಸಲಿದ್ದಾರೆ – ಜಿ.ಟಿ.ದೇವೇಗೌಡ, ಶಾಸಕ.

**

ನನ್ನನ್ನು ಮೂರು ಬಾರಿ ಸೋಲಿಸಿದ್ದೀರಿ. ಈಗ ನಾಲ್ಕನೇ ಬಾರಿಯೂ ಸೋಲಿಸಬೇಡಿ. ಈ ಬಾರಿಯಾದರೂ ಗೆಲ್ಲಿಸಿ – ಮಹೇಶ್,ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.