ಚಾಮರಾಜನಗರ: ತಾ.ಪಂ. ಸ್ಥಾಯಿಸಮಿತಿ ರಚನೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆಯೊಂದಿಗೆ ಪ್ರತಿಪಕ್ಷದವರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲವೆಂಬ ಕೂಗು ಚರ್ಚೆಗೆ ಗ್ರಾಸವಾಯಿತು. ಸಭೆಯ ಆರಂಭದಲ್ಲೇ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸ್ಥಾಯಿಸಮಿತಿಗೆ ಸದಸ್ಯರ ಆಯ್ಕೆ ಸಂಬಂಧ ಸಭೆ ಕರೆದಿಲ್ಲ. ಜತೆಗೆ, ಆಡಳಿತ ಪಕ್ಷದವರಿಗೆ ಹೆಚ್ಚಿನ ಮನ್ನಣೆ ನೀಡಲಾಗಿದೆ.
ಪ್ರತಿಪಕ್ಷದ ಇಬ್ಬರು ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕನಿಷ್ಠ ನಾಲ್ಕು ಮಂದಿಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಅವರನ್ನೂ ಸಮಿತಿಯಿಂದ ಕೈಬಿಡಿ ಎಂದು ಬಿಜೆಪಿ ಸದಸ್ಯರು ಪಟ್ಟುಹಿಡಿದರು. ಅಧ್ಯಕ್ಷೆ, ಉಪಾಧ್ಯಕ್ಷರು ಹಾಗೂ ಕಾರ್ಯ ನಿರ್ವಹಣಾಧಿಕಾರಿ, ಸದಸ್ಯರ ಮನವೊಲಿಸಲು ಮುಂದಾದರು. ಆದರೆ, ಯಾವುದೇ ಮನವಿಗೆ ವಿಪಕ್ಷದವರು ಕಿವಿಗೊಡಲಿಲ್ಲ.
ಕೊನೆಗೆ ಅಧ್ಯಕ್ಷೆ ಪದ್ಮಾ ಮಾತನಾಡಿ, ಪ್ರಸ್ತುತ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಬಿಜೆಪಿಯ ಆರ್. ಮಹದೇವ್ ಮತ್ತು ಜಡೇಸ್ವಾಮಿಗೆ ಸಮಿತಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಳಿದ ಇಬ್ಬರ ಹೆಸರನ್ನು ಸೂಚಿಸಿದರೆ ಸಮಿತಿಗಳಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಗುವುದು’ ಎಂದು ಭರವಸೆ ನೀಡುವುದರೊಂದಿಗೆ ಚರ್ಚೆಗೆ ತೆರೆ ಎಳೆದರು.
ಸ್ಥಾಯಿಸಮಿತಿ ಸದಸ್ಯರ ವಿವರ- ಹಣಕಾಸು -ಲೆಕ್ಕ ಪರಿಶೋಧನಾ ಸಮಿತಿ:
ಪದ್ಮಾ ಚಂದ್ರು(ಅಧ್ಯಕ್ಷೆ), ಗಾಯತ್ರಿ, ಪಾರ್ವತಮ್ಮ, ಮಹಾಲಿಂಗು, ಮೀನಾಕ್ಷಿ, ಎಂ. ಚಿಕ್ಕಮಹದೇವು(ಸದಸ್ಯರು).
ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ: ಲಲಿತಾ(ಅಧ್ಯಕ್ಷೆ), ಮಹಾದೇವಿ, ಶಶಿಕಲಾ, ಕೆ.ಎಂ. ಸಿದ್ದನಾಯಕ, ಜಯಶೀಲಾ, ವಿಜಯ ದೇವರಾಜ್(ಸದಸ್ಯರು).
ಸಾಮಾನ್ಯ ಸ್ಥಾಯಿಸಮಿತಿ: ಮಹಾಲಿಂಗಸ್ವಾಮಿ(ಅಧ್ಯಕ್ಷ), ಬಸವಣ್ಣ, ರತ್ನಮ್ಮ, ಆರ್. ಮಹದೇವ್, ಕಾಂತಾಮಣಿ, ಎಂ.ಎಸ್. ಜಡೇಸ್ವಾಮಿ(ಸದಸ್ಯರು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.