ADVERTISEMENT

ಸ್ಮಾರ್ಟ್‌ಕಾರ್ಡ್ ಯೋಜನೆಗೆ ಚಾಲನೆ: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 7:50 IST
Last Updated 22 ಅಕ್ಟೋಬರ್ 2012, 7:50 IST

ಕೊಳ್ಳೇಗಾಲ: ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗೆ ಮನೆ ಬಾಗಿಲಲ್ಲೇ ನೇರವಾಗಿ ಹಣ ದೊರ ಕಿಸುವ ವಿನೂತನ ಸ್ಮಾರ್ಟ್‌ಕಾರ್ಡ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ ಎಂದು ತಹಶೀಲ್ದಾರ್ ಸುರೇಶ್‌ಕುಮಾರ್ ತಿಳಿಸಿದರು.

ಕುಣಗಳ್ಳಿಯಲ್ಲಿ ಸಾಮಾಜಿಕ ಭದ್ರತೆಯ ಫಲಾನುಭವಿಗಳಿಗೆ ಸಮರ್ಪಕವಾಗಿ ಸ್ಮಾರ್ಟ್ ಕಾರ್ಡ್ ವಿತರಣೆಯಾಗದಿರುವ ಬಗ್ಗೆ ಬಂದ ದೂರಿನ ಮೇರೆ ಕುಣಗಳ್ಳಿ ಗ್ರಾಮದಲ್ಲಿ ಖುದ್ದಾಗಿ ಪರಿಶೀಲಿಸಿ ಫಲಾನುಭವಿ ಗಳಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಿ ಮಾತನಾಡಿದರು.

ಸಂಧ್ಯಾ, ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ಇತರೆ ಸಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಅಂಚೆ ಮೂಲಕ ಹಣ ನೀಡುತ್ತಿದ್ದು, ದುರುಪಯೋಗದ ಹಿನ್ನೆಲೆಯಲ್ಲಿ ನೇರವಾಗಿ ಫಲಾನುಭವಿ ಮನೆಬಾಗಿಲಿಗೇ ಹಣ ತಲುಪಿಸುವ ಸ್ಮಾರ್ಟ್‌ಕಾರ್ಡ್ ವ್ಯವಸ್ಥೆ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

35 ಸಾವಿರ ಫಲಾನುಭವಿಗಳಿದ್ದು, ಈಗ 8,915 ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿ ಸಲಾಗಿದೆ. ಈ ಕಾರ್ಡ್ ಹೊಂದಿದ ಫಲಾನುಭವಿ ಮನೆಗೆ ಇಂಟಿಗ್ರಾ ಕಂಪನಿ ವ್ಯವಹಾರ ಸಂಯೋಜಕರು ಬಂದು ಫಲಾನುಭವಿ ಹೆಬ್ಬೆರಳಿನ ಗುರುತನ್ನು ಸಂಬಂಧಪಟ್ಟ ಯಂತ್ರದಲ್ಲಿ ಹಾಕಿದ ತಕ್ಷಣ ಸ್ಥಳದಲ್ಲೇ ಹಣ ವಿತರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರ ನೀಡಿದರು.

ಸ್ಮಾರ್ಟ್‌ಕಾರ್ಡ್ ಹೊಂದಿದ್ದರೂ ಫಲಾನುಭವಿಗಳಿಗೆ ಹಣ ಬಾರದಿದ್ದಲ್ಲಿ ತಕ್ಷಣ ಸಂಬಂಧಪಟ್ಟ ಗ್ರಾಮಲೆಕ್ಕಿಗರು ಅಥವಾ ತಹಶೀಲ್ದಾರ್ ಕಚೇರಿ ಸಂಪರ್ಕಿಸಬೇಕು ಎಂದರು.

ಸ್ಮಾರ್ಟ್ ಕಾರ್ಡ್ ಮಾಡಿಕೊಳ್ಳದ ಫಲಾನುಭವಿಗಳಿಗೆ ಅಂಚೆ ಇಲಾಖೆ ಮೂಲಕವೇ ಸದ್ಯದಲ್ಲಿ ಹಣ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಎಲ್ಲಾ ಫಲಾನುಭವಿಗಳಿಗೂ ಸ್ಮಾರ್ಟ್‌ಕಾರ್ಡ್ ನೀಡಲಾಗುವುದು ಎಂದು ತಿಳಿಸಿದರು.

270 ಫಲಾನುಭವಿಗಳ ಸ್ಮಾರ್ಟ್ ಕಾರ್ಡ್‌ಗಳು ತಾಲ್ಲೂಕು ಕಚೇರಿಯಲ್ಲಿ ಇದೆ. ಪಟ್ಟಣದಲ್ಲಿ ಸ್ಮಾರ್ಟ್‌ಕಾರ್ಡ್ ದೊರೆಯದ ಫಲಾನುಭವಿಗಳು ಖುದ್ದಾಗಿ ತಮ್ಮ ಕಚೇರಿಗೆ ಬಂದು  ಸ್ಮಾರ್ಟ್ ಕಾರ್ಡ್ ಪಡೆಯ ಬಹುದಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.