ADVERTISEMENT

ಹಲ್ಲೆ: ಐದು ಆರೋಪಿಗಳ ಬಂಧನ

‘ರೈಸ್‌ ಪುಲ್ಲಿಂಗ್’ ಚೆಂಬು ನೀಡುವುದಾಗಿ ವಂಚಿಸಿದವನ ಅಪಹರಣಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 15:15 IST
Last Updated 20 ಮಾರ್ಚ್ 2020, 15:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುಡಿಬಂಡೆ: ಕೋಟಿ ಬೆಲೆಬಾಳುವ ‘ರೈಸ್‌ ಪುಲ್ಲಿಂಗ್’ ಚೆಂಬು ನೀಡುವುದಾಗಿ ಹಣ ಪಡೆದು ವಂಚಿಸಿದವನ ಅಪಹರಣಕ್ಕೆ ಸುಪಾರಿ ನೀಡಿದಾತ ಮತ್ತು ಅಪಹರಿಸಲು ಬಂದು ಹಲ್ಲೆ ನಡೆಸಿದ ಸುಪಾರಿ ತಂಡ ನಾಲ್ಕು ಆರೋಪಿಗಳನ್ನು ಗುಡಿಬಂಡೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಗರುಡಾಚಾರ್ಲಹಳ್ಳಿ ನಿವಾಸಿ ಗಣೇಶ್‌ ಅವರು ಕೆಲ ತಿಂಗಳ ಹಿಂದೆ ಬೆಂಗಳೂರಿನ ಯಲಹಂಕದ ರಾಮಗೊಂಡನಹಳ್ಳಿಯ ಪ್ರಕಾಶ್ ಸಿಂಹ ಕೇತ್ವಾಲ್ ಎಂಬುವರಿಗೆ ‘ರೈಸ್‌ ಪುಲ್ಲಿಂಗ್’ ಚೆಂಬು ನೀಡುವುದಾಗಿ ಆಸೆ ತೋರಿಸಿ ಅವರಿಂದ ₹60 ಲಕ್ಷ ಪಡೆದಿದ್ದರು ಎಂದು ಪೊಲೀಸರು ತಿಳಿಸಿದರು.

ಕೊಟ್ಟ ಮಾತಿನಂತೆ ಚೆಂಬು ನೀಡದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಗಣೇಶ್‌ ಅವರನ್ನು ಸೆರೆ ಹಿಡಿದು ತರುವಂತೆ ಪ್ರಕಾಶ್‌, ಬಾಗೇಪಲ್ಲಿ ತಾಲ್ಲೂಕಿನ ನಕ್ಕಲವಾರಪಲ್ಲಿ ಗ್ರಾಮದ ಮಣಿಕಂಠ (27) ನಾಗೇಶ್‌ (27), ಬೆಂಗಳೂರಿನ ವಿದ್ಯಾರಣ್ಯಪುರದ ರಂಜಿತ್ (23), ಬೆಂಗಳೂರಿನ ಕಾಟನ್ ಪೇಟೆಯ ಸಂದೀಪ್ ಅವರ ತಂಡಕ್ಕೆ ₹10 ಲಕ್ಷ ಸುಪಾರಿ ನೀಡಿದ್ದರು ಎಂದು ಹೇಳಿದರು.

ADVERTISEMENT

ಸುಪಾರಿ ಪಡೆದ ತಂಡ ಇತ್ತೀಚೆಗೆ ರಾತ್ರಿ ವೇಳೆ ಗರುಡಾಚಾರ್ಲಹಳ್ಳಿ ಬಂದು ಗಣೇಶ್‌ ಅವರನ್ನು ತಮ್ಮ ವಾಹನದಲ್ಲಿ ಬಲವಂತದಿಂದ ಕರೆದುಕೊಂಡು ಹೋಗುವ ವೇಳೆ ಗುಂಪು ಘರ್ಷಣೆ ಉಂಟಾಗಿ, ಗಣೇಶ್‌ ಮೇಲೆ ಹಲ್ಲೆ ನಡೆದಿತ್ತು.

ಈ ಬಗ್ಗೆ ಅವರು ಗುಡಿಬಂಡೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿಗಳಿಂದ ಒಂದು ಡ್ರ್ಯಾಗರ್, ಎರಡು ಮಚ್ಚು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.