ADVERTISEMENT

ಚಂಗಡಿ ಪುನರ್‌ವಸತಿ: 430 ಎಕರೆ ಪ್ರದೇಶದಲ್ಲಿ ಸರ್ವೆ

ಅರಣ್ಯ, ಕೃಷಿ, ಭೂಮಾಪನ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 16:43 IST
Last Updated 3 ಆಗಸ್ಟ್ 2021, 16:43 IST
ಹನೂರು ತಾಲ್ಲೂಕಿನ ವೈಶಂಪಾಳ್ಯ ಗ್ರಾಮದ ಸಮೀವಿರುವ ಅರಣ್ಯ ಪ್ರದೇಶದಲ್ಲಿ ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಮಂಗಳವಾರ ಸರ್ವೆ ಕಾರ್ಯ ನಡೆಯಿತು.
ಹನೂರು ತಾಲ್ಲೂಕಿನ ವೈಶಂಪಾಳ್ಯ ಗ್ರಾಮದ ಸಮೀವಿರುವ ಅರಣ್ಯ ಪ್ರದೇಶದಲ್ಲಿ ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಮಂಗಳವಾರ ಸರ್ವೆ ಕಾರ್ಯ ನಡೆಯಿತು.   

ಹನೂರು: ತಾಲ್ಲೂಕಿನ ಬಹುನಿರೀಕ್ಷಿತ ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ವತಿಯಿಂದ ಗುರುತಿಸಲಾಗಿರುವ ಪ್ರದೇಶದಲ್ಲಿ ಮಂಗಳವಾರ ಕೃಷಿ, ಭೂಮಾಪನ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೆ ಕಾರ್ಯ ನಡೆಸಿದರು.

ಗ್ರಾಮದ ವಸತಿ ಸಮುಚ್ಚಯ, ಮೂಲ ಸೌಕರ್ಯಗಳು, ಕೆರೆಗಳ ನಿರ್ಮಾಣ, ಕೃಷಿ ಭೂಮಿ ಇನ್ನಿತರೆ ಅನುಕೂಲಗಳ ಸಂಬಂಧ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಸರ್ವೆ ಕಾರ್ಯ ನಡೆಯಿತು. ಚಂಗಡಿ ಗ್ರಾಮಸ್ಥರು ಕೂಡ ಇದರಲ್ಲಿ ಭಾಗವಹಿಸುವುದರ ಮೂಲಕ ಅಧಿಕಾರಿಗಳಿಗೆ ಸಹಕಾರ ನೀಡಿದರು.

ಮಲೆಮಹದೇಶ್ವರ ವನ್ಯಧಾಮದ ಡಿಸಿಎಫ್ ವಿ. ಏಡುಕುಂಡಲು ಅವರು ಮಾತನಾಡಿ, ‘ವೈಶಂಪಾಳ್ಯ ಬಳಿಯ 430 ಎಕರೆ ಅರಣ್ಯ ಪ್ರದೇಶದಲ್ಲಿ ಚಂಗಡಿ ಪುನರ್‌ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 50 ಎಕರೆಯಷ್ಟು ಸ್ಥಳವನ್ನು ಗ್ರಾಮಠಾಣವನ್ನಾಗಿ, 300 ಎಕರೆಯನ್ನು 135 ಜನರಿಗೆ ಕೃಷಿ ಭೂಮಿಯನ್ನಾಗಿ ವಿಂಗಡಿಸಲು ತೀರ್ಮಾನಿಸಲಾಗಿದೆ. ಇದಲ್ಲದೇ ಗ್ರಾಮದಲ್ಲಿ ಆಟದ ಮೈದಾನ, ಸಮುದಾಯ ಭವನ, ಕೆರೆಗಳ ನಿರ್ಮಾಣ, ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಕ್ರಮ ಕೈಗೊಳ್ಳಲಿದೆ’ ಎಂದರು.

ADVERTISEMENT

‘ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆ ಕಾರ್ಯ ನಿರ್ವಹಿಸಲಿದೆ. ನಿರ್ಮಾಣ ಮಾಡಿದ ಮನೆಗಳಲ್ಲಿ ಮಳೆ ನೀರು ಇಂಗಿಸಲು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೃಷಿ ಇಲಾಖೆ ಮಣ್ಣು ಪರೀಕ್ಷೆ ನಡೆಸಿ ಎಲ್ಲೆಲ್ಲಿ ಕೆರೆಗಳನ್ನು ನಿರ್ಮಿಸಬೇಕು ಎಂಬುದನ್ನು ಅಧ್ಯಯನ ಮಾಡಿ ಕೆರೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಿದೆ’ ಎಂದರು.

3 ತಿಂಗಳೊಳಗೆ ಕೆಲಸ ಆರಂಭ: ‘ಈಗಾಗಲೇ ಸರ್ವೆ ಕಾರ್ಯ ಆರಂಭವಾಗಿದೆ. ಇದೇ 13ರಂದು ಜಿಲ್ಲಾ ಮಟ್ಟದ ಸಭೆ ನಡೆಯಲಿದೆ. ಅಲ್ಲಿ ಅನುಮೋದನೆ ದೊರೆಯುತ್ತಿದ್ದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರದ ಒಪ್ಪಿಗೆ ಸಿಕ್ಕ ತಕ್ಷಣ ಯೋಜನೆ ಆರಂಭಗೊಳ್ಳಲಿದೆ. ಮೂರು ತಿಂಗಳೊಳಗೆ ಈ ಯೋಜನೆಗೆ ಚಾಲನೆ ದೊರೆಯಲಿದೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಮಲೆಮಹದೇಶ್ವರ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯಲಕ್ಷಿ, ತಹಶೀಲ್ದಾರ್ ಜಿ.ಎಚ್.ನಾಗರಾಜು, ಭೂ ಮಾಪನಾ ಇಲಾಖೆ ಸಹಾಯಕ ನಿರ್ದೇಶಕ ಚೇತನ್, ಸರ್ವೇ ಸೂಪರ್‌ವೈಸರ್‌ ಕುಮಾರಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಪಶು ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಲೋಕೋಪಯೋಗಿ ಇಲಾಖೆಯ ಚಿನ್ನಣ್ಣ ಇದ್ದರು.

ಚಂಗಡಿ ಗ್ರಾಮಸ್ಥರ ಸಂತಸ
ಸರ್ವೆ ಕಾರ್ಯ ಆರಂಭವಾಗಿರುವುದಕ್ಕೆ ಚಂಗಡಿಯ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಚಂಗಡಿ ಕರಿಯಪ್ಪ ಅವರು ಮಾತನಾಡಿ, ‘ವರ್ಷಗಳ ಹೋರಾಟದ ಫಲವಾಗಿ ಚಂಗಡಿ ಪುನರ್‌ವಸತಿ ಕಾರ್ಯ ಫಲಪ್ರದವಾಗುತ್ತಿರುವುದು ಸಂತಸ ತಂದಿದೆ. ವಿಶೇಷವಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಪುನರ್‌ವಸತಿ ಸಂಬಂಧ ವಿವಿಧ ಇಲಾಖೆಗಳಿಗೆ ಗ್ರಾಮದ ಎಲ್ಲರೂ ಸಹಕಾರ ನೀಡಲಿದ್ದೇವೆ’ ಎಂದು ತಿಳಿಸಿದರು.

‘ಶಿಕ್ಷಣ, ಆರೋಗ್ಯ ಎಂಬುದು ನಮ್ಮ ಮಕ್ಕಳಿಗೆ ಕನಸಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಬಂದು ನಮಗೆ ಎಲ್ಲ ವ್ಯವಸ್ಥೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಇಲ್ಲಿ ನಮಗೆ ಹೊಸದಾಗಿ ಗ್ರಾಮವನ್ನೇ ಸೃಷ್ಟಿಸುತ್ತಿದ್ದಾರೆ. ನಮಗಂತೂ ಸೌಲಭ್ಯ ಎಂಬುದು ಮರಿಚಿಕೆಯಾಗಿತ್ತು. ನಮ್ಮ ಮಕ್ಕಳಿಗಾದರೂ ಎಲ್ಲ ಸೌಲಭ್ಯ ಸಿಗುವಂತಾಗಲಿ’ ಎಂದು ಚಂಗಡಿ ಗ್ರಾಮದ ದೊಡ್ಡೇಗೌಡ ಅವರು ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.