ADVERTISEMENT

ಯಳಂದೂರು: ತ್ರಿವರ್ಣ ಧ್ವಜಕ್ಕೆ ಪೆಂಗಾಲಿ ವೆಂಕಯ್ಯರ ಸ್ಪರ್ಶ

ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರ ಧ್ವಜ ಅಂಗೀಕಾರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:25 IST
Last Updated 27 ಜುಲೈ 2025, 4:25 IST
ಯಳಂದೂರು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಧ್ವಜ ದಿನಾಚರಣೆಯಲ್ಲಿ ಬೋಧಕರಾದ ಕೃಷ್ಣನಾಯಕ್, ಬೇಬಿರಾಣಿ, ಮಂಜುಳ, ಶೀಲಾ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಯಳಂದೂರು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಧ್ವಜ ದಿನಾಚರಣೆಯಲ್ಲಿ ಬೋಧಕರಾದ ಕೃಷ್ಣನಾಯಕ್, ಬೇಬಿರಾಣಿ, ಮಂಜುಳ, ಶೀಲಾ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.    

ಯಳಂದೂರು: ಭಾರತದ ಅಸ್ಮಿತೆಯ ಸಂಕೇತ, ಆತ್ಮಾಭಿಮಾನದ ಹೆಗ್ಗುರುತಾಗಿರುವ ತ್ರಿವರ್ಣಧ್ವಜಕ್ಕೆ ಗೌರವ ಸಲ್ಲಿಸಲು ಹಲವು ಶಾಲೆಗಳಲ್ಲಿ ಈಚೆಗೆ ರಾಷ್ಟ್ರೀಯ ಧ್ವಜ ದಿನಾಚರಣೆ ಸಂಭ್ರಮದಿಂದ ನೆರವೇರಿತು. 

ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ದೇಶದ ಧ್ವಜ ವಿಕಾಸದ ಕುರಿತು ಕಾರ್ಯಕ್ರಮ ಗಮನ ಸೆಳೆಯಿತು. ಭಾವೈಕ್ಯ, ದೇಶಪ್ರೇಮ ಜಾಗೃತಗೊಳಿಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಧ್ವಜ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. 

ದೇಶದಾದ್ಯಂತ ಆಚರಿಸಲಾಗುವ ರಾಷ್ಟ್ರೀಯ ಧ್ವಜ ದಿನದಲ್ಲಿ ತಿರಂಗದ ಚರಿತ್ರೆ, ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ದೇಶಾಭಿಮಾನ ಮೂಡಿಸುವ ಗೀತ ಗಾಯನ ಪ್ರಸ್ತುತಪಡಿಸಲಾಗುತ್ತದೆ. ರಾಷ್ಟ್ರೀಯವಾದಿಗಳು ಬ್ರಿಟಿಷರ ವಿರುದ್ಧದ ಹೋರಾಟದ ಸಂದರ್ಭ ರಚಿಸಿದ್ದ ಬಾವುಟಗಳ ಮಾದರಿಗಳನ್ನು ಪ್ರದರ್ಶನ ಮಾಡಲಾಗುತ್ತದೆ.

ADVERTISEMENT

ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ರವಿಕುಮಾರ್ ಮಾತನಾಡಿ, ‘1947ರ ಜುಲೈ 22ರಂದು ಸಂವಿಧಾನ ಸಭೆಯಲ್ಲಿ ರಾಷ್ಟ್ರಧ್ವಜವನ್ನು ಅಂಗೀಕರಿಸಲಾಯಿತು. ಇದರ ಸ್ಮರಣಾರ್ಥ ಪ್ರತಿವರ್ಷ ಅಂದು ರಾಷ್ಟ್ರೀಯ ಧ್ವಜ ದಿನ ಆಚರಿಸುತ್ತ ಬರಲಾಗಿದೆ ಎಂದರು.

1906ರ ಆಗಸ್ಟ್ 7ರಂದು ಸ್ವಾತಂತ್ರ್ಯಹೋರಾಟದ ಸಮಯದಲ್ಲಿ ಕೋಲ್ಕತ್ತದಲ್ಲಿ ಮೊದಲ ಬಾರಿ ರಾಷ್ಟ್ರಧ್ವಜ ಹಾರಿಸಲಾಯಿತು. ಆಗಿನ ಧ್ವಜವು ಕೆಂಪು, ಹಳದಿ, ಹಸಿರು ಬಣ್ಣದ ಮೂರು ಪಟ್ಟಿಗಳನ್ನು ಹೊಂದಿತ್ತು, ಮಧ್ಯದಲ್ಲಿ ‘ವಂದೇಮಾತರಂ’, ಸೂರ್ಯ–ಚಂದ್ರರ ಚಿತ್ರಗಳು ಇತ್ತು. 1907ರಲ್ಲಿ ಪ್ಯಾರಿಸ್ ನಗರದಲ್ಲಿ ಭಾರತೀಯರು ಹಾರಿಸಿದ ಧ್ವಜ ಸಪ್ತಋಷಿಗಳನ್ನು ಸೂಚಿಸುವ 7 ನಕ್ಷತ್ರಗಳನ್ನು ಹೊಂದಿತ್ತು. ಮತ್ತೆ, ಹೋಮ್ ರೂಲ್ ಚಳವಳಿ ಸಂದರ್ಭ 5 ಕೆಂಪು ಮತ್ತು 4 ಹಸಿರು ಪಟ್ಟಿಯ ಜೊತೆ ನಕ್ಷತ್ರ ಒಳಗೊಂಡಿತ್ತು. ಹೀಗೆ, ಆಯಾ ಕಾಲಘಟ್ಟಕ್ಕೆ ತಕ್ಕಂತೆ ಧ್ವಜದ ವಿನ್ಯಾಸ, ವಿಕಾಶ, ಆಕಾರ, ಬಣ್ಣವೂ ಬದಲಾಗಿದೆ’ ಎಂದು ಇತಿಹಾಸ ಶಿಕ್ಷಕಿ ಶೈಲಜಾ ಹೇಳಿದರು.

ದೇಶಕ್ಕೆ ಹೊಂದುವ ರಾಷ್ಟ್ರಧ್ವಜದ ಅಗತ್ಯ ಮನಗಂಡ ಮಹಾತ್ಮ ಗಾಂಧೀಜಿ 1921ರಲ್ಲಿ ಪೆಂಗಾಲಿ ವೆಂಕಯ್ಯ ಅವರಿಗೆ ಧ್ವಜ ವಿನ್ಯಾಸ ಮಾಡಲು ಸೂಚಿಸಿದ್ದರು. 1921ರಲ್ಲಿ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನದಲ್ಲಿ ಕೆಂಪು ಹಸಿರು ಬಣ್ಣಗಳಿಂದ ರಚಿಸಲಾಗಿದ್ದ ಧ್ವಜವನ್ನು ವೆಂಕಯ್ಯ ಪ್ರಸ್ತುತಪಡಿಸಿದ್ದರು.

ಕೆಂಪು ಹಾಗೂ ಹಸಿರು ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳನ್ನು ಪ್ರತಿಬಿಂಬಿಸುತ್ತಿದ್ದವು. ದೇಶದ ಉಳಿದ ಸಮುದಾಯಗಳನ್ನು ಪ್ರತಿನಿಧಿಸುವ ಸಲುವಾಗಿ ಧ್ವಜದಲ್ಲಿ ಬಿಳಿ ಬಣ್ಣ ಸೇರಿಸಲು ಗಾಂಧೀಜಿ ಸೂಚಿಸಿದ್ದರು. ಕೆಲವು ಮಾರ್ಪಾಡುಗಳ ನಂತರ 1931ರಲ್ಲಿ ಧ್ವಜ ರೂಪಿಸಲಾಯಿತು. ಕೆಂಪು ಬಣ್ಣದ ಬದಲಿಗೆ ಕೇಸರಿ ಆಯ್ಕೆ ಮಾಡಿ, ಕ್ರಮವಾಗಿ ಕೇಸರಿ, ಬಳಿ, ಹಸಿರು ಬಣ್ಣದ ದ್ವಜ ರಚಿಸಿ ಮಧ್ಯದಲ್ಲಿ ಚರಕ ಇರಿಸಲಾಯಿತು. ನಂತರ ಚರಕದ ಸ್ಥಳದಲ್ಲಿ ಅಶೋಕ ಚಕ್ರ ಇರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.