ADVERTISEMENT

ಜೂನ್‌ ಜುಲೈನಲ್ಲಿ ಕೈಕೊಟ್ಟ ಮಳೆ: ಬಿತ್ತನೆಗೆ ಹಿನ್ನಡೆ

1.7 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ ಪ್ರತಿಯಾಗಿ 43.559 ಹೆಕ್ಟೇರ್ ಸಾಧನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 4:42 IST
Last Updated 24 ಜುಲೈ 2025, 4:42 IST
ಯಳಂದೂರು ತಾಲ್ಲೂಕಿನಲ್ಲಿ ರೈತರೊಬ್ಬರು ಟ್ರ್ಯಾಕ್ಟರ್‌ನಲ್ಲಿ ಜಮೀನು ಹದಗೊಳಿಸುತ್ತಿರುವುದು
ಯಳಂದೂರು ತಾಲ್ಲೂಕಿನಲ್ಲಿ ರೈತರೊಬ್ಬರು ಟ್ರ್ಯಾಕ್ಟರ್‌ನಲ್ಲಿ ಜಮೀನು ಹದಗೊಳಿಸುತ್ತಿರುವುದು   

ಚಾಮರಾಜನಗರ: ಕರಾವಳಿ ಹಾಗೂ ಮಲೆನಾಡಿನಲ್ಲಿ ವರುಣ ಅಬ್ಬರಿಸುತ್ತಿದ್ದರೆ ಜಿಲ್ಲೆಯಲ್ಲಿ ಮಾತ್ರ ಮಳೆ ಕೊರತೆ ಕಾಡುತ್ತಿದ್ದು ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತಲೂ ಕಡಿಮೆ ಮಳೆ ಬಿದ್ದಿದ್ದು ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಕಾರ್ಯಗಳು ನಡೆದಿಲ್ಲ.

ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಜನವರಿಯಲ್ಲಿ 2.9 ಮಿ.ಮೀ ಮಳೆಗೆ ಪ್ರತಿಯಾಗಿ 2.6 ಮಿ.ಮೀ, ಫೆಬ್ರುವರಿಯಲ್ಲಿ 7.4 ಮಿಮೀ ವಾಡಿಕೆ ಮಳೆಗೆ ಶೂನ್ಯ, ಮಾರ್ಚ್‌ನಲ್ಲಿ 15.3 ಮಿ.ಮೀ ವಾಡಿಕೆ ಮಳೆಗೆ 16.4, ಏಪ್ರಿಲ್‌ನಲ್ಲಿ 63.8 ಮಿ.ಮೀ ವಾಡಿಕೆಗೆ ಪ್ರತಿಯಾಗಿ 86.6, ಮೇನಲ್ಲಿ 114 ಮಿ.ಮೀ ವಾಡಿಕೆಗೆ 119.2 ಮಿ.ಮೀ ಮಳೆ ಬಿದ್ದರೆ, ಜೂನ್‌ನಲ್ಲಿ 58.4 ಮಿ.ಮೀ ವಾಡಿಕೆಗೆ ಪ್ರತಿಯಾಗಿ ಕೇವಲ 31.8 ಮಿ.ಮೀ, ಜುಲೈನಲ್ಲಿ 40.1 ಮಿಮೀ ವಾಡಿಕೆ ಮಳೆಗೆ ಪ್ರತಿಯಾಗಿ 31.9 ಮಿ.ಮೀ ಮಾತ್ರ ಮಳೆ ಸುರಿದಿದೆ. 

ಜನವರಿಯಿಂದ ಜುಲೈ (21ರವರೆಗೆ) ವಾಡಿಕೆ 301.9 ಮಿ.ಮೀ ಮಳೆಗೆ ಪ್ರತಿಯಾಗಿ 288.5 ಮಿ.ಮೀ ಸುರಿದಿದ್ದು ಶೇ 4.4ರಷ್ಟು ಕೊರತೆ ಕಾಣಿಸಿಕೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 374 ಮಿ.ಮೀ ಮಳೆ ಬಿದ್ದಿತ್ತು.  

ADVERTISEMENT

ಪ್ರಸಕ್ತ ವರ್ಷದ ಜೂನ್ ಹಾಗೂ ಜುಲೈ ತಿಂಗಳ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ತೀರಾ ಕಡಿಮೆಯಾಗಿರುವುದು ಕಾಣುತ್ತದೆ. 2024ರ ಜೂನ್‌ನಲ್ಲಿ ವಾಡಿಕೆ 58.4 ಮಿ.ಮೀಗೆ ಪ್ರತಿಯಾಗಿ 98 ಮಿ.ಮೀ ಮಳೆ ಸುರಿದಿತ್ತು. ಜುಲೈನಲ್ಲೂ 40.1 ಮಿ.ಮೀ ವಾಡಿಕೆಗೆ 71.6 ಮಿ.ಮೀ ಮಳೆ ಬಿದ್ದಿತ್ತು. 

ಹನೂರಿನಲ್ಲಿ ಗಂಭೀರ:

ಸಂಪೂರ್ಣ ಮಳೆಯಾಶ್ರಿತ ಕೃಷಿ ಭೂಮಿ ಹೊಂದಿರುವ ಹನೂರು ತಾಲ್ಲೂಕಿನಲ್ಲಿ ಜಿಲ್ಲೆಯಲ್ಲೇ ಅತಿ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಜೂನ್‌ನಲ್ಲಿ ಶೇ 65.9, ಜುಲೈನಲ್ಲಿ ಶೇ 48.6ರಷ್ಟು ಮಳೆ ಕಡಿಮೆಯಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ ಜೂನ್‌ನಲ್ಲಿ ಶೇ 58.7, ಜುಲೈನಲ್ಲಿ ಶೇ 14.1, ಯಳಂದೂರು ತಾಲ್ಲೂಕಿನಲ್ಲಿ ಜೂನ್‌ನಲ್ಲಿ ಶೇ 49.5, ಜುಲೈನಲ್ಲಿ ಶೇ 6ರಷ್ಟು, ಚಾಮರಾಜನಗರ ತಾಲ್ಲೂಕಿನಲ್ಲಿ ಜೂನ್‌ನಲ್ಲಿ ಶೇ 36 ಮಳೆ ಕೊರತೆ ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಹೆಚ್ಚು ಬಿತ್ತನೆ ನಡೆಯುವ ಅವಧಿಯಾಗಿರುವ ಜೂನ್ ಹಾಗೂ ಜುಲೈನಲ್ಲಿ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.2025–26ನೇ ಸಾಲಿನ ಮುಂಗಾರು ಅವಧಿಯಲ್ಲಿ 1,07,914 ಹೆಕ್ಟೇರ್ ಬಿತ್ತನೆ ಗುರಿಗೆ ಪ್ರತಿಯಾಗಿ ಇದುವರೆಗೂ 43,559 ಹೆಕ್ಟೇರ್ ಮಾತ್ರ ಬಿತ್ತನೆ ನಡೆದಿದ್ದು ಶೇ 40.36ರಷ್ಟು ಗುರಿ ಸಾಧನೆಯಾಗಿದೆ.

ಮಳೆ ಕೊರತೆ

ಜೂನ್ ಹಾಗೂ ಜುಲೈನ ಮಧ್ಯದವರೆಗೂ ತೀವ್ರ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಪ್ರಸ್ತುತ ಸುರಿಯುತ್ತಿರುವ ಮಳೆಯಿಂದ ನಾಟಿ ಕಾರ್ಯ ಚುರುಕು ಪಡೆದುಕೊಂಡಿದೆ. ಸದ್ಯ ಜಿಲ್ಲೆಯಲ್ಲಿ ರಾಗಿ ನಾಟಿ ಕಾರ್ಯ ಭರದಿಂದ ಸಾಗಿದ್ದು ಮುಂದಿನ ತಿಂಗಳು ಭತ್ತ ನಾಟಿ ಕಾರ್ಯ ಆರಂಭವಾಗಲಿದೆ. ಜಿಲ್ಲೆಯಲ್ಲಿ ಬಿತ್ತನೆಬೀಜ ಹಾಗೂ ರಸಗೊಬ್ಬರ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಬಿದ್ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.