ಸಂತೇಮರಹಳ್ಳಿ: ಸಮೀಪದ ಕುದೇರು ಚಾಮುಲ್ ಘಟಕದಲ್ಲಿ ಐಸ್ಕ್ರೀಂ ಘಟಕ ಸ್ಥಾಪನೆ ಮಾಡುವುದನ್ನು ವಿರೋಧಿಸಿ ರೈತರು ಸೋಮವಾರ ಪೂರ್ವಭಾವಿ ಸಭೆ ನಡೆಸಿದರು.
‘ಬೇರೆ ಜಿಲ್ಲೆಗಳಲ್ಲಿ ಉತ್ಪಾದಕರಿಗೆ ನೀಡುವ ಹಾಲಿನ ದರವನ್ನೇ ಈ ಜಿಲ್ಲೆಯ ಒಕ್ಕೂಟದಲ್ಲಿ ನೀಡಬೇಕು. ಸರ್ಕಾರದಿಂದ ಚಾಮುಲ್ಗೆ ಬರಬೇಕಾದ ₹51ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಐಸ್ ಕ್ರೀಂ ಘಟಕ ಸ್ಥಾಪನೆ ಮಾಡಬೇಕು. ಬ್ಯಾಂಕ್ ಮೂಲಕ ಸಾಲ ಪಡೆದುಕೊಂಡು ಐಸ್ ಕ್ರೀಂ ಘಟಕ ಸ್ಥಾಪನೆ ಮಾಡಲು ಮುಂದಾದರೆ ಹೋರಾಟ ಅನಿವಾರ್ಯ’ ಎಂದು ರೈತ ಮುಖಂಡರು ಎಚ್ಚರಿಸಿದರು.
‘ಜಿಲ್ಲೆಯ ಕೆಲವು ಬಿಎಂಸಿ ಕೇಂದ್ರಗಳಿಂದ ಕಲಬೆರಕೆ ಹಾಲು ಪೂರೈಕೆಯಾಗುತ್ತಿದೆ. ಇದರಿಂದ ಉತ್ಪಾದಕರಿಗೆ ತೊಂದರೆಯಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ಮುಂದಾಗಿಲ್ಲ. ಕೂಡಲೇ ಆಂತಹ ಬಿಎಂಸಿ ಕೇಂದ್ರಕ್ಕೆ ಅಧಿಕಾರಿಗಳು ಭೇಟಿ ನೀಡಿ ಕಲಬೆರಕೆ ಹಾಲು ಪೂರೈಕೆಗೆ ಕಡಿವಾಣ ಹಾಕಬೇಕು’ ಎಂದು ರೈತರು ಒತ್ತಾಯಿಸಿದರು.
ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಮಾತನಾಡಿ,‘ರೈತರ ಹಿತ ಕಾಯುವ ನಿಟ್ಟಿನಲ್ಲಿ ಒಕ್ಕೂಟ ಕೆಲಸ ನಿರ್ವಹಿಸುತ್ತಿದೆ. ಒಕ್ಕೂಟಕ್ಕೆ ವರ್ಷದಿಂದ ವರ್ಷಕ್ಕೆ ಹಾಲು ಪೂರೈಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಮಾರಾಟ ಪ್ರಮಾಣ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ವ್ಯಾಪ್ತಿಯ ಬಂಡೀಪುರ, ಹಿಮವದ್ ಗೋಪಾಲಸ್ವಾಮಿಬೆಟ್ಟ, ಬಿಳಿಗಿರಿರಂಗಸ್ವಾಮಿಬೆಟ್ಟ, ಮಹದೇಶ್ವರಬೆಟ್ಟ ಸೇರಿದಂತೆ ಹಲವು ಕಡೆಗಳಲ್ಲಿ ನಂದಿನಿ ಪಾರ್ಲರ್ ಆರಂಭ ಮಾಡಲಾಗಿದೆ’ಎಂದರು.
‘ಜೊತೆಗೆ ತಮಿಳುನಾಡು, ಕೇರಳಗಳಿಗೆ ಹಾಲು ಪೂರೈಕೆ ಮಾಡಲಾಗುತ್ತಿದೆ. ಐಸ್ ಕ್ರೀಂ ಘಟಕ ಆರಂಭಗೊಂಡರೆ ಪೂರೈಕೆಯಾಗುವ ಹಾಲಿನ ಪ್ರಮಾಣದಲ್ಲಿ ಐಸ್ ಕ್ರೀಂಗೆ ಹಾಲನ್ನು ಬಳಕೆ ಮಾಡಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ರೈತ ಮುಖಂಡ ಹೊನ್ನೂರು ಪ್ರಕಾಶ್, ಕುದೇರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಫಣಿರಾಜ್ ಮೂರ್ತಿ, ಹಳ್ಳಿಕೆರೆಹುಂಡಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶಿವಸ್ವಾಮಿ, ಕೋಡಿಮೋಳೆ ಶಿವರುದ್ರಸ್ವಾಮಿ, ಉಮ್ಮತ್ತೂರು ಬಸವರಾಜು, ಮಾಡ್ರಹಳ್ಳಿ ಪಾಪಣ್ಣ, ಹಳ್ಳದಮಾದಹಳ್ಳಿ ಲೋಕೇಶ್, ಷಣ್ಮುಖಸ್ವಾಮಿ, ಜಗದೀಶ್, ದಿನೇಶ್, ಅಂಬಳೆ ಶಿವಕುಮಾರ್, ಮೆಲಾಜೀಪುರ ಮಲ್ಲೇಶ್, ಮುಳ್ಳೂರು ವೀರಭದ್ರಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.