ಚಾಮರಾಜನಗರ: ಪ್ರತಿಯೊಬ್ಬರೂ ತಾಯಿಯ ಹೆಸರಿನಲ್ಲಿ ಗಿಡ ನೆಟ್ಟು ಪೋಷಿಸಿದರೆ ಪರಿಸರ ರಕ್ಷಣೆಯಾಗುವುದರ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗಲಿದ ಎಂದು ನಗರಸಭೆ ಅಧ್ಯಕ್ಷ ಸುರೇಶ್ ಸಲಹೆ ನೀಡಿದರು.
ನಗರದ ರಾಮಸಮುದ್ರದ ಸುಬೇದಾರ ಕಟ್ಟೆಯಲ್ಲಿ ಅಮೃತ್ ಮಿತ್ರ ಮತ್ತು ಡೇ ನಲ್ಮ್ ಸಹಯೋಗದೊಂದಿಗೆ ನಡೆದ ಮರಗಳ ರಕ್ಷಣೆಗಾಗಿ ಮಹಿಳೆಯರ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆತ್ತ ತಾಯಿಯನ್ನು ಪ್ರೀತಿಸಿದಂತೆ ಪ್ರಕೃತಿಯನ್ನೂ ಪ್ರೀತಿಸಿದಾಗ ಪರಿಸರ ಉಳಿಯುತ್ತದೆ. ಮುಂದಿನ ಪೀಳಿಗೆಗೂ ದಕ್ಕುತ್ತದೆ. ಪರಿಸರ ರಕ್ಷಿಸಿದರೆ ಮಾನವ ಕುಲ ಉಳಿಯುತ್ತದೆ ಎಂಬ ಅರಿವು ನಮ್ಮೊಳಗೆ ಇರಲಿ ಎಂದು ಸಲಹೆ ನೀಡಿದರು.
ತಾಯಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಕ್ಕಳನ್ನು ಸಲುಹುವಂತೆ ಪ್ರಕೃತಿಯೂ ಫಲಾಪೇಕ್ಷೆ ಬೇಡದೆ ಭೂಮಿಯನ್ನು ಸಲುಹುತ್ತಿದೆ. ಪರಿಸರ ನಾಶವಾದರೆ ಮನುಕುಲವೂ ನಾಶವಾಗಲಿದೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ನೆಡೋಣ ಎಂದು ಕರೆ ನೀಡಿದರು.
ನಗರದ ದೊಡ್ಡಅರಸನ ಕೊಳ, 9ನೇ ವಾರ್ಡ್ನಲ್ಲಿರುವ ಉದ್ಯಾನ ಮತ್ತು ಸುಬೇದಾರ ಕಟ್ಟೆಗಳಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಭೇಟಿಮಾಡಿ ಪರಿಸರ ರಕ್ಷಣೆಯ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಯೋಜನಾ ನಿರ್ದೇಶಕಿ ಸುಧಾ, ಸಹಾಯಕ ನಿರ್ದೇಶಕ ಮಲ್ಲೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ, ಸಮುದಾಯ ಸಂಘಟನಾಧಿಕಾರಿ ವೆಂಕಟ್ ನಾಯಕ, ಅಭಿಯಾನ ವ್ಯವಸ್ಥಾಪಕ ಹಮ್ಜತ್ ಪಾಷಾ, ಎಸ್.ಪುಟ್ಟಸ್ವಾಮಿ, ಅಬ್ದುಲ್ ಅನ್ಸರ್ ಖಾನ್, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗ ಸ್ವಸಹಾಯ ಗುಂಪಿನ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.