ADVERTISEMENT

ಯಳಂದೂರು: ಮಳೆಗಾಗಿ ಸೋಲಿಗರಿಂದ ದೇವರಿಗೆ ಜೇನುತುಪ್ಪದ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 5:08 IST
Last Updated 20 ಏಪ್ರಿಲ್ 2024, 5:08 IST
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಬಸಪ್ಪನ ಕಾಡಿನಲ್ಲಿ ಶುಕ್ರವಾರ ಸಂಜೆ ಬಸಪ್ಪನ ವಿಗ್ರಹಕ್ಕೆ ಜೇನಿನ ಅಭಿಷೇಕ ಮಾಡಿ ಮಳೆಗಾಗಿ ಸೋಲಿಗರು ಪ್ರಾರ್ಥನೆ ಸಲ್ಲಿಸಿದರು
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಬಸಪ್ಪನ ಕಾಡಿನಲ್ಲಿ ಶುಕ್ರವಾರ ಸಂಜೆ ಬಸಪ್ಪನ ವಿಗ್ರಹಕ್ಕೆ ಜೇನಿನ ಅಭಿಷೇಕ ಮಾಡಿ ಮಳೆಗಾಗಿ ಸೋಲಿಗರು ಪ್ರಾರ್ಥನೆ ಸಲ್ಲಿಸಿದರು   

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಕಾಡಿನ ನಡುವಿನ ಬಸವ ಕಾಡಿನ ಬಸಪ್ಪ ದೇವರಿಗೆ ಸೋಲಿಗರು ಶುಕ್ರವಾರ ಸಂಜೆ ಮಳೆ ಬೆಳೆ ಸಮೃದ್ಧಿಗಾಗಿ ಜೇನುತುಪ್ಪದ ಅಭಿಷೇಕ ನೆರವೇರಿಸಿದರು.

ಪ್ರತಿ ವರ್ಷ ಬಿಳಿಗಿರಿರಂಗನ ಜಾತ್ರೆ ಉತ್ಸವಕ್ಕೂ ಮುನ್ನ ಬೆಟ್ಟದಲ್ಲಿ ಮಳೆ ಸುರಿಯುವ ವಾಡಿಕೆ ಇದೆ. ಬಸಪ್ಪ ದೇವರ ಮೂಲ ವಿಗ್ರಹಕ್ಕೆ ಅರಿಸಿನ, ಕುಂಕುಮ ಹಾಕಿ ಕಾಡು ಹೂ ಮಾಲೆ ಅರ್ಪಿಸಿ, ಜೇನು ಹುಟ್ಟನ್ನು ಕಿತ್ತು ಮೂಲ ಮೂರ್ತಿಯ ಮೇಲೆ ಹಿಂಡಿದರು.

ಜೇನು ತುಪ್ಪವನ್ನು ವಿಗ್ರಹದ ತುಂಬಾ ಚೆಲ್ಲಿ ಅಭಿಷೇಕ ನೆರವೇರಿಸಿದರೆ ಕಾಡಿಗೆ ಸಮೃದ್ಧ ಮಳೆಯಾಗುತ್ತದೆ ಎಂಬ ನಂಬಿಕೆ ಸೋಲಿಗರದ್ದು.

ADVERTISEMENT

‘ಪ್ರತಿ ವರ್ಷ ಏಪ್ರಿಲ್-ಮೇ ನಡುವೆ ಕನ್ನೇರಿ ಕಲೊನಿ ಮತ್ತು ಬಿಳಿಗಿರಿಬೆಟ್ಟದ ನಡುವಿನ ಕಾಡಿಗೆ ಬುಡಕಟ್ಟು ಜನರು ಮಿಂದು ಮಡಿ ಬಟ್ಟೆ ತೊಟ್ಟು ತೆರಳುತ್ತಾರೆ. ಇಲ್ಲಿನ ದೇವರಿಗೆ ಪೂಜೆ ನೆರವೇರಿಸುತ್ತಾರೆ. ಅರ್ಚನೆ ಮುಗಿದ ಮೂರು ದಿನಗಳಲ್ಲಿ ವರ್ಷಧಾರೆಯಾಗಿ ಕಾಡಿನ ಕೆರೆ-ಕಟ್ಟೆಗಳು ನೀರು ಪಡೆಯಲಿವೆ’ ಎಂದು ಬಂಗ್ಲೆಪೋಡಿನ ಬೊಮ್ಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.