ADVERTISEMENT

ಶ್ರಾವಣ ಮಾಸದ ಮೊದಲ ದಿನ: ಮಾದಪ್ಪನಿಗೆ ಶತಕುಂಭಾಭಿಷೇಕ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 11:23 IST
Last Updated 9 ಆಗಸ್ಟ್ 2021, 11:23 IST
ಶತಕುಂಭಾಭಿಷೇಕಕ್ಕಾಗಿ ಬೇಡಗಂಪಣ ಸಮುದಾಯದವರು ಮೆರವಣಿಗೆಯ ಮೂಲಕ ತಂಬಿಗೆಯಲ್ಲಿ ಅಭಿಷೇಕ ಜಲವನ್ನು ಹೊತ್ತು ತಂದರು
ಶತಕುಂಭಾಭಿಷೇಕಕ್ಕಾಗಿ ಬೇಡಗಂಪಣ ಸಮುದಾಯದವರು ಮೆರವಣಿಗೆಯ ಮೂಲಕ ತಂಬಿಗೆಯಲ್ಲಿ ಅಭಿಷೇಕ ಜಲವನ್ನು ಹೊತ್ತು ತಂದರು   

ಮಹದೇಶ್ವರ ಬೆಟ್ಟ: ಶ್ರಾವಣ ಮಾಸದ ಮೊದಲ ದಿನವಾದ ಸೋಮವಾರ ಇಲ್ಲಿನ ಮಲೆಮಹದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಪುನಸ್ಕಾರ, ಶತಕುಂಭಾಭಿಷೇಕ ನೆರವೇರಿತು.

ಕೋವಿಡ್‌ ಕಾರಣಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯ‌ರ ಉಪಸ್ಥಿತಿಯಲ್ಲಿ ಬೇಡಗಂಪಣ ಸಮುದಾಯದ ವಿಧಿವಿಧಾನಗಳ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೇಡಗಂಪಣ ಜನಾಂಗದ ಮಕ್ಕಳು ಉಪವಾಸದಿಂದಿದ್ದು, ಮಜ್ಜನ ಬಾವಿಯಿಂದ 108 ಬಿಂದಿಗೆಗಳಲ್ಲಿ ನೀರು ಮತ್ತು 108 ಎಳನೀರನ್ನು ವಿಧಿ ವಿಧಾನದಂತೆ ವೇದ ಮಂತ್ರ ಘೋಷಣೆಗಳ ನಡುವೆ ಪೂಜೆ ಮಾಡಿ ಮಂಗಳವಾಧ್ಯಗಳ ಸಮೇತವಾಗಿ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.

ADVERTISEMENT

ದೇವಾಲಯದ ಒಳಭಾಗದಲ್ಲಿ ಪ್ರದಕ್ಷಿಣೆ ಮಾಡಿ ಗರ್ಭಗುಡಿ ಪಕ್ಕದಲ್ಲಿರುವ ಮಂಟಪದಲ್ಲಿ ಬಾಳೆ ಎಲೆಯಲ್ಲಿ ಹಾಕಲಾಗಿದ್ದ ಅಕ್ಕಿಯ ಮೇಲೆ ಎಳನೀರು ಮತ್ತು ಜಲವನ್ನು ತುಂಬಿದ ಬಿಂದಿಗೆಗಳನ್ನು ಇಡಲಾಯಿತು.

ಸಾಲೂರು ಮಠದ ಪೀಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ಎಲ್ಲ ಕಳಶಗಳಿಗೆ ಪೂಜೆ ಸಲ್ಲಿಸಿ, ನಂತರ ಮಲೆ ಮಹದೇಶ್ವರ ಸ್ವಾಮಿಗೆ ಅಭಿಷೇಕವನ್ನು ಮಾಡಲಾಯಿತು.

ವಿಶೇಷ ಅಲಂಕಾರ: ಶ್ರಾವಣ ಮಾಸದ ಮೊದಲ ದಿನ ನಡೆಯುವ ವಿಶೇಷ ಶತಕುಂಭಾಭಿಷೇಕ್ಕಾಗಿ ಇಡೀ ದೇವಾಲಯವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.

ಮ.3ರ ನಂತರ ಅವಕಾಶ: ಸಾಮಾನ್ಯವಾಗಿ ಆಷಾಢ ಮಾಸದ ಕೊನೆಯ ದಿನ ಅಂದರೆ ಭೀಮನ ಅಮಾವಾಸ್ಯೆಯಂದು ಹಾಗೂ ಶ್ರಾವಣ ಮಾಸದ ಮೊದಲ ದಿನ ಪ್ರತಿ ವರ್ಷ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ವಿವಿಧ ಸೇವೆಗಳನ್ನು ಸಲ್ಲಿಸುತ್ತಾರೆ.

ಈ ಬಾರಿ ಕೋವಿಡ್‌ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಸೋಮವಾರಮಧ್ಯಾಹ್ನದವರೆಗೂ ಈ ಧಾರ್ಮಿಕ ಕಾರ್ಯಕ್ರಮಗಳು ಇದ್ದುದರಿಂದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಮೂರು ಗಂಟೆಯ ನಂತರ ಎಂದಿನಂತೆ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.