ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಎಂ.ಜಿ.ಎಸ್.ವಿ ಸ್ಫೋಟ್ಸ್ ಕ್ಲಬ್ ಬಾಲಕ ಮತ್ತು ಬಾಲಕಿಯರಿಗೆ ‘ಅಂಬೇಡ್ಕರ್ ತತ್ವಗಳ ಕಡೆ ನಮ್ಮ ಓಟ’ ಶೀರ್ಷಿಕೆಯಡಿ ಮಿನಿ ಮ್ಯಾರಥಾನ್ ಸ್ಪರ್ಧೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾನುವಾರ ಚಾಲನೆ ನೀಡಿದರು.
ಬಾಲಕರಿಗೆ 6 ಕಿ.ಮೀ, ಬಾಲಕಿಯರಿಗೆ 3 ಕಿ.ಮೀ ಓಟದ ಸ್ಪರ್ಧೆಯಲ್ಲಿ 70 ಬಾಲಕರು ಹಾಗೂ 40 ಬಾಲಕಿಯರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಗವಾನ್ ಬುದ್ಧ ಮತ್ತು ಅಂಬೇಡ್ಕರ್ ಅವರ ಭಾವಚಿತ್ರದ ಮುದ್ರಣವುಳ್ಳ ಟೀ ಶರ್ಟ್ ಧರಿಸಿ ಗಮನ ಸೆಳೆದರು.
ಮ್ಯಾರಥಾನ್ನಲ್ಲಿ ವಿಜೇತರಾದ ಮಕ್ಕಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಬಹುಮಾನ ವಿತರಿಸಿ ಮಾತನಾಡಿ,‘ಕೊಳ್ಳೇಗಾಲ ಕಲೆಯ ತವರೂರಾಗಿದೆ ಹಾಗೂ ಕ್ರೀಡಾ ಪ್ರೇಮಿಗಳು ಹೆಚ್ಚಿದ್ದಾರೆ. ನನಗೂ ಕ್ರೀಡೆ ಮೇಲೆ ಆಸಕ್ತಿ ಹೆಚ್ಚಿದೆ. ಮಕ್ಕಳು ಶಿಕ್ಷಣ ಜತೆಗೆ ಕ್ರೀಡೆಗೆ ಆದ್ಯತೆ ನೀಡಬೇಕು. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ. ಇಂದು ಅಂಬೇಡ್ಕರ್ ಜಯಂತಿ ಅಂಗವಾಗಿ ಸ್ಪರ್ಧೆ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ’ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ವಿನ್ಸಂಟ್ ಆಶೀರ್ವಾದ್ ಮಾತನಾಡಿ, ‘ಯುವಕರ ಆಲೋಚನೆಗಳೆ ಬೇರೆಯಾಗಿದೆ. ಇದರ ಜೊತೆಗೆ ತಾಳ್ಮೆ ಕಳೆದುಕೊಂಡಿದ್ದಾರೆ. ಹಣ ಸಂಪಾದನೆ ಮತ್ತು ಹೆಸರು ಸಂಪಾದಿಸಬೇಕೆಂಬ ಧಾವಂತ ಹೆಚ್ಚಿದೆ. ದೇಶದ ಭವಿಷ್ಯವಾದ ಯುವಕರು ಮೌಲ್ಯಯುತ ಜೀವನಕ್ಕೆ ಪ್ರಾಮುಖ್ಯತೆ ನೀಡಬೇಕು. ಕ್ರೀಡೆಗೆ ಹೆಚ್ಚು ಆದ್ಯತೆ ನೀಡಿದರೆ ಆರೋಗ್ಯವಂತ ದೇಶ ನಮ್ಮದಾಗುತ್ತದೆ’ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಧರ್ಮೇಂದ್ರ, ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಸುರೇಶ್, ಸದಸ್ಯ ಮಂಜುನಾಥ್, ನಾಮ ನಿರ್ದೇಶನ ಸದಸ್ಯ ಶಿವಮಲ್ಲು, ದೇವಾನಂದ್, ಸ್ವಾಮಿ ನಂಜಪ್ಪ, ಕಾರ್ಯಕ್ರಮದ ಆಯೋಜಕ ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಚೇತನ್ ದೊರೈರಾಜ್, ಸುಮನ್, ದರ್ಶನ್, ವಿನೋದ್, ಹರ್ಷ, ಅಜಯ್, ಶರತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.