ಹನೂರು: ಹಲವು ವರ್ಷಗಳಿಂದ ಸಾಗುವಾಗಿ ಮಾಡಿಕೊಂಡು ಬಂದಿದ್ದ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡ ಕಾರಣಕ್ಕೆ ಮನನೊಂದು ದೊಡ್ಡಾಲತ್ತೂರು ಗ್ರಾಮದ ರಾಜಮ್ಮ (55) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಗಳು ದೂರಿದ್ದಾರೆ.
ರಾಮಾಪುರ ಸಮೀಪದ ಕೆಂಪಯ್ಯನಹಟ್ಟಿ ಗ್ರಾಮದ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ದೊಡ್ಡಾಲತ್ತೂರು ಗ್ರಾಮದ ಸರ್ವೇ ನಂಬರ್ 80ರಲ್ಲಿ 20 ಸೆಂಟ್ ಜಾಗವನ್ನು ರಾಜಮ್ಮ ಸಾಗುವಳಿ ಮಾಡುತ್ತಿದ್ದರು. ಈಚೆಗೆ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಸಂಬಂಧ ನಾಮಫಲಕ ಹಾಕಿದ್ದರು. ಇದರಿಂದ ತೀವ್ರ ಮನನೊಂದು ರಾಜಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ದೂರಿದ್ದಾರೆ.
ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನನ್ನು ರಾಜಮ್ಮನವರ ಬಳಿಯಿಂದ ಕಿತ್ತುಕೊಂಡಿದ್ದು ಸರಿಯಲ್ಲ. ತೀರಾ ಬಡತನದಿಂದ ಬಳಲುತ್ತಿದ್ದ ರಾಜಮ್ಮನಿಗೆ ನಾಲ್ಕು ಹೆಣ್ಣು ಮಕ್ಕಳಿದ್ದು ಜೀವನ ನಡೆಸಲು ಕಷ್ಟವಾಗಿತ್ತು. ಒತ್ತುವರಿ ತೆರವಿನಿಂದ ಮನನೊಂದು ರಾಜಮ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗ್ರಾಮದ ಶಂಕರಪ್ಪ ಬೇಸರ ವ್ಯಕ್ತಪಡಿಸಿದರು.
ಶಾಸಕ ಮಂಜುನಾಥ್ ಭೇಟಿ:
ಶಾಸಕ ಎಂ ಆರ್ ಮಂಜುನಾಥ್ ಮೃತ ಮಹಿಳೆಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಒತ್ತುವರಿ ತೆರವಿಗೆ ಮನನೊಂದು ಮಹಿಳೆಯ ಸಾವು ಆಘಾತಕಾರಿಯಾಗಿದ್ದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಕುಟುಂಬಸ್ಥರ ಮನವೊಲಿಸಿ ಶವ ಸಂಸ್ಕಾರಕ್ಕೆ ಮನವಿ ಮಾಡಿದರು.
ತಹಶೀಲ್ದಾರ್ ಚೈತ್ರಾ ಭೇಟಿ ನೀಡಿ ಮೃತರ ಕುಟುಂಬಸ್ಥರ ಮನವೊಲಿಸಲು ಯತ್ನಿಸಿದಾಗ ಒಪ್ಪದ ಕುಟುಂಬಸ್ಥರು ಜಾಗ ನೀಡುವರೆಗೂ ಮೃತ ದೇಹ ತೆಗೆಯುವುದಿಲ್ಲ ಎಂದು ಪಟ್ಟುಹಿಡಿದರು. ರಾಮಾಪುರ ಠಾಣೆಯ ಇನ್ಸ್ಪೆಕ್ಟರ್ ಚಿಕ್ಕರಾಜುಶೆಟ್ಟಿ, ಪಿಎಸ್ಐ ಈಶ್ವರ್ ಹಾಗೂ ಸಿಬ್ಬಂದಿ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.