ADVERTISEMENT

ಅಣಕು ಸಂಸತ್ತಿನಲ್ಲಿ ವಾದ-ವಿವಾದ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 6:05 IST
Last Updated 20 ಜನವರಿ 2012, 6:05 IST

ಶಿಡ್ಲಘಟ್ಟ: ಭ್ರಷ್ಟಾಚಾರ, ಕನ್ನಡ ಶಾಲೆ ಗಳನ್ನು ಮುಚ್ಚುವ ಬಗ್ಗೆ, ಭೂಹಗರಣದ ಬಗ್ಗೆ ವಿರೋಧ ಪಕ್ಷದವರು ಆಕ್ಷೇಪಿಸಿ ದರೆ, ಆಹಾರ ಪೌಷ್ಠಿಕತೆ, ಇಂಧನ ಸದ್ಬಳಕೆ, ಕ್ರೀಡೆ ಮುಂತಾದವುಗಳ ಬಗ್ಗೆ ಆಡಳಿತ ಪಕ್ಷದ ಸದಸ್ಯರು ಮಾತನಾ ಡಿದರು. ಇದೆಲ್ಲ ನಡೆದದ್ದು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಅಲ್ಲ. ತಾಲ್ಲೂಕಿನ ಬೋದಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಅಣಕು ಸಂಸತ್ತಿನಲ್ಲಿ.

ಬೋದಗೂರು, ಯಣ್ಣಂಗೂರು, ಬೆಳ್ಳೂಟಿ, ಭಕ್ತರಹಳ್ಳಿ, ಮಳಮಾಚನಹಳ್ಳಿ ಮತ್ತು ಬಸವಾಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವಿದ್ಯಾರ್ಥಿಗಳು ಆಗಮಿಸಿ ಅಣಕು ಸಂಸತ್ತಿನಲ್ಲಿ ಭಾಗವಹಿಸಿದ್ದರು. ಅರಣ್ಯ, ನೀರಾವರಿ, ಆರೋಗ್ಯ, ಸಾರಿಗೆ, ಬಡವರ ಬಗ್ಗೆ, ಶೌಚಾಲಯ, ವಿದ್ಯಾರ್ಥಿವೇತನ, ಆಹಾರ ಬಳಕೆ ಮತ್ತು ಉತ್ಪಾದನೆ, ಶಿಕ್ಷಣದ ಹೊಸ ಬದಲಾವಣೆಗಳು, ಮೆಟ್ರೋ ರೈಲು, ಅಕ್ಷರದಾಸೋಹ, ರೈಲ್ವೆ, ವಿದ್ಯಾಭ್ಯಾಸ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ವಾದಗಳನ್ನು ಮಂಡಿಸಿದರು. 

 ಕಲಾಪದ ಅಧ್ಯಕ್ಷತೆ, ಸ್ಪೀಕರ್, ಆಡಳಿತ ಪಕ್ಷ, ವಿರೋಧ ಪಕ್ಷವನ್ನೆಲ್ಲಾ ಶಾಲಾ ವಿದ್ಯಾರ್ಥಿಗಳೇ ವಹಿಸಿದ್ದರು. ಆರೂ ಶಾಲೆಗಳ ವಿದ್ಯಾರ್ಥಿಗಳು ಅಣಕು ಸಂಸತ್ತನ್ನು ನಡೆಸಿಕೊಟ್ಟರು.

 `ವಿದ್ಯಾರ್ಥಿಗಳಿಗೆ ನಮ್ಮ ರಾಜಕೀಯ ವ್ಯವಸ್ಥೆಯನ್ನು ಪರಿಚಯಿಸಲು ಈ ಅಣಕು ಸಂಸತ್ತನ್ನು ಸಹಪಠ್ಯ ಚಟುವಟಿಕೆಯಾಗಿ ನಡೆಸುತ್ತೇವೆ.

 ಅವರೇ ಸಮಸ್ಯೆಯ ಬಗ್ಗೆ ಮಾತನಾಡುವುದು ಮತ್ತು ಪರಿಹಾರಕ್ಕೂ ಯೋಚಿಸುವುದು ಇದರ ಒಂದು ಭಾಗವಾದರೆ, ಅವರೇ ಚುನಾಯಿತ ಪ್ರತಿನಿಧಿಗಳಂತೆ ಪಾತ್ರವಹಿಸುವುದರಿಂದ ನಮ್ಮ ರಾಜ್ಯಾಂಗದ ಪರಿಕಲ್ಪನೆ ಅವರಿಗೆ ಅರ್ಥವಾಗುತ್ತದೆ. ಮಕ್ಕಳಲ್ಲಿ ರಾಜಕೀಯ ಪ್ರಜ್ಞೆ, ದೇಶದ ಸಮಸ್ಯೆಗಳ ಬಗ್ಗೆ ಕಾಳಜಿ, ಭ್ರಷ್ಟಾಚಾರ ನಿರ್ಮೂಲನೆ, ರಾಜಕೀಯ ನಾಯಕರ ಕರ್ತ್ಯಗಳ ಬಗ್ಗೆ ಅರಿವು, ದೇಶದ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳುವಳಿಕೆ~ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ ತಿಳಿಸಿದರು.

ಅಣಕು ಸಂಸತ್ತಿನಲ್ಲಿ ಭಾಗವಹಿಸಿದ್ದ ಎಲ್ಲಾ 75 ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿಲಾಯಿತು. ಬೋದಗೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿಕೃಷ್ಣಪ್ಪ, ಶಿಕ್ಷಕರಾದ ನಾರಾಯಣಸ್ವಾಮಿ, ಎನ್.ರವಿ. ಮಳಮಾಚನಹಳ್ಳಿ ಪುಟ್ಟಪ್ಪ, ಬೆಳ್ಳೂಟಿ ನಾಗರಾಜ್, ಭಕ್ತರಹಳ್ಳಿ ನೇತ್ರಾವತಿ, ಯಣ್ಣಂಗೂರು ಶಕುಂತಲಾ, ಬಸವಾಪಟ್ಟಣ ಮಂಜುನಾಥ್, ರುಕ್ಮಿಣಿಯಮ್ಮ, ಅನಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.