ADVERTISEMENT

ಸಿರಿಧಾನ್ಯಗಳತ್ತ ಹೊರಳಿದ ರೈತರ ಚಿತ್ತ

ಟಿ.ನಂಜುಂಡಪ್ಪ
Published 15 ಅಕ್ಟೋಬರ್ 2017, 6:32 IST
Last Updated 15 ಅಕ್ಟೋಬರ್ 2017, 6:32 IST
ಗೌರಿಬಿದನೂರು ತಾಲ್ಲೂಕಿನ ಮರಳೂರು ಗ್ರಾಮದ ಪ್ರಗತಿಪರ ರೈತ ಹನುಮಂತರೆಡ್ಡಿ ಒಂದು ಎಕರೆಯಲ್ಲಿ ನವಣೆ ಬೆಳೆದಿರುವುದು.
ಗೌರಿಬಿದನೂರು ತಾಲ್ಲೂಕಿನ ಮರಳೂರು ಗ್ರಾಮದ ಪ್ರಗತಿಪರ ರೈತ ಹನುಮಂತರೆಡ್ಡಿ ಒಂದು ಎಕರೆಯಲ್ಲಿ ನವಣೆ ಬೆಳೆದಿರುವುದು.   

ಗೌರಿಬಿದನೂರು ತಾಲ್ಲೂಕಿನಲ್ಲಿ ಕೆಲ ದಶಕಗಳಿಂದ ಕಣ್ಮರೆಯಾಗಿದ್ದ ಸಿರಿಧಾನ್ಯದ ಬೆಳೆಗಳು ಇದೀಗ ಅಲ್ಲಲ್ಲಿ ಕಾಣಲು ಆರಂಭಿಸಿವೆ. ಮಳೆ ಜೂಜಾಟದಿಂದ ಬೇಸತ್ತ ರೈತರು ಅಲ್ಪ ನೀರಿನಲ್ಲಿಯೂ ಚೆನ್ನಾಗಿ ಬೆಳೆಯುವ ಸಿರಿಧಾನ್ಯಗಳತ್ತ ಮುಖ ಮಾಡಿದ್ದಾರೆ.

ಒಂದು ಕಾಲಕ್ಕೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ನವಣೆ, ಹಾರಕ, ಸಜ್ಜೆ, ಬರಗ, ಸಾಮೆ, ಕೊರಲೆ ಇದೀಗ ಬಹುತೇಕ ಎಲ್ಲಾ ಕಡೆ ಬೇಡಿಕೆ ಪಡೆಯುತ್ತಿವೆ. ಬದಲಾದ ಆಹಾರ ಪದ್ಧತಿಯಿಂದ ಮಕ್ಕಳು ಹಾಗೂ ಜನರಲ್ಲಿ ಅಪೌಷ್ಟಿಕತೆ, ರೋಗ ನಿರೋಧಕ ಶಕ್ತಿ ಕುಂದುತ್ತಿರುವುದು  ಸಿರಿಧಾನ್ಯಗಳಿಗೆ ಬೇಡಿಕೆ ಬರುವಂತಾಗಿದೆ.

ನೀರಾವರಿ ಇಲ್ಲದೆಯೇ ಕೇವಲ ಮಳೆಯ ಆಶ್ರಯದಲ್ಲಿ ಉತ್ತಮವಾಗಿ ಬೆಳೆಯುವ ಸಿರಿಧಾನ್ಯಗಳು ಬಯಲುಸೀಮೆಯ ರೈತಾಪಿ ವರ್ಗಕ್ಕೆ ದಿನೇ ದಿನೇ ಹತ್ತಿರವಾಗುತ್ತಿವೆ. ಗೋಧಿ, ಭತ್ತದ ಬೆಳೆ ಬೆಳೆಯಲು ಬೇಕಾಗುವ ನೀರಿನಲ್ಲಿ ಕೇವಲ ಶೇ 25ರಷ್ಟು ನೀರು ಲಭಿಸಿದರೂ ಸಾಕು ಸಿರಿಧಾನ್ಯಗಳು ಹುಲುಸಾಗಿ ಬೆಳೆಯುತ್ತವೆ.

ADVERTISEMENT

ಸಿರಿಧಾನ್ಯ ಬೆಳೆಯಲು ಫಲವತ್ತಾದ ಭೂಮಿ ಬೇಕಾಗಿಲ್ಲ. ಒಣ ಭೂಮಿ, ಕಲ್ಲು ಬಂಡೆಗಳಿಂದ ಕೂಡಿರುವ ಬರಡು ಭೂಮಿಯಲ್ಲೂ ಬೆಳೆಯಬಹುದು. ಯಾವುದೇ ಹವಾಮಾನದಲ್ಲೂ ಬೇಕಾದರೂ ಹೊಂದಿಕೊಳ್ಳವ ಬೆಳೆಯಾಗಿದೆ. ಈ ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ ಅಗತ್ಯವಿಲ್ಲ. ಕಂಪೆನಿಗಳ ಬೀಜಗಳು, ಕೀಟನಾಶಕ, ಕ್ರಿಮಿನಾಶಕಗಳು ಬೇಕಾಗಿಯೇ ಇಲ್ಲ.

‘ಮಧುಮೇಹ, ಬೊಜ್ಜು ಮತ್ತಿತರ ಕಾಯಿಲೆಗಳಿಗೆ ಈ ಧಾನ್ಯಗಳ ಸೇವನೆ ರಾಮಬಾಣವಿದ್ದಂತೆ. ಹಿಂದೆ ಸಿರಿಧಾನ್ಯಗಳು ಬರುತ್ತಿದ್ದ ಕಾಲದಲ್ಲಿ ಜನ ಉತ್ತಮ ಆರೋಗ್ಯ ಹೊಂದಿ ಗಟ್ಟಿಮುಟ್ಟಾಗಿದ್ದರು. ಯಾವುದೇ ರೋಗ ಇವರ ಬಳಿ ಸುಳಿಯುತ್ತಿರಲಿಲ್ಲ’ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎನ್. ಮಂಜುನಾಥ್.

ಗರ್ಭಿಣಿ ಮಹಿಳೆಯರಿಗೆ, ವೃದ್ಧರಿಗೆ, ಬೇಕಾಗುವ ಪೋಷಕಾಂಶಗಳು ಈ ಧಾನ್ಯಗಳಲ್ಲಿ ಅಡಗಿದೆ. ನಾರಿನಾಂಶ ಇರುವುದರಿಂದ ಜೀರ್ಣಶಕ್ತಿಗೆ ಸಹಕಾರಿಯಾಗಲಿದೆ. ಅಕ್ಕಿ ಮತ್ತು ಗೋಧಿಗಿಂತಲೂ ಈ ಧಾನ್ಯಗಳಲ್ಲಿ ಪ್ರೋಟಿನ್, ಕ್ಯಾಲ್ಸಿಯಂ, ವಿಟಮಿನ್‌ಗಳು ಐದು ಪಟ್ಟು ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.

‘ಸಿರಿಧಾನ್ಯ ಬೆಳೆಯುವ ರೈತರಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಇರುವುದರಿಂದ ಈ ಬೆಳೆಗಳು ಬೆಳೆಯಲು ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಉತ್ತೇಜಿಸಬೇಕಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಅಕ್ಕಿ, ಗೋಧಿ, ಜತೆಗೆ ಈ ಧಾನ್ಯಗಳನ್ನು ವಿತರಿಸಬೇಕು’ ಎಂದು ಜಲತಜ್ಞ ಕೆ. ನಾರಾಯಣಸ್ವಾಮಿ ಪ್ರತಿಪಾದಿಸಿದರು.

ವಿದ್ಯಾರ್ಥಿ ನಿಲಯಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ, ಸರ್ಕಾರಿ ಕ್ಯಾಂಟಿನ್‌ಗಳಲ್ಲಿ ಇವುಗಳನ್ನು ಕಡ್ಡಾಯವಾಗಿ ಬಳಸುವ ವ್ಯವಸ್ಥೆ ಜಾರಿಗೊಳಿಸಿದರೆ ಮಾರುಕಟ್ಟೆ ಸಮಸ್ಯೆಗೆ ಪರಿಹಾರವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.