ಶಿಡ್ಲಘಟ್ಟ: ಕೊಳವೆ ಬಾವಿಯಿದ್ದರೂ ನೀರಿನ ಸೌಲಭ್ಯವಿಲ್ಲ, ನಾಯಿಗಳ ಕಾಟ, ಮಳೆ ಬಂದರೆ ಓಡಾಡಲು ಅಸಾಧ್ಯ, ಕಳೆಗಿಡಗಳು ಎಲ್ಲೆಂದರಲ್ಲಿ ಬೆಳೆದಿರುವುದರಿಂದ ಹಾವುಗಳ ಕಾಟ... – ಇದು ಪೊಲೀಸ್ ಕ್ವಾಟರ್ಸ್ ದುಃಸ್ಥಿತಿ. ಊರಿನ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವ ಪೊಲೀಸರು ತಮ್ಮ ಮನೆಗಳಿರುವ ಪ್ರದೇಶವನ್ನೇ ಸ್ವಚ್ಛವಾಗಿಟ್ಟುಕೊಳ್ಳದಷ್ಟು ಅಸಹಾಯಕರಾಗಿದ್ದಾರೆಯೇ? ಎಂದು ನಾಗರಿಕ ಸಮುದಾಯ ಪ್ರಶ್ನಿಸುವಂತಾಗಿದೆ.
ಕ್ವಾಟರ್ಸ್ಗಳಲ್ಲಿ ಒಬ್ಬರು ಸರ್ಕಲ್ ಇನ್ಸ್ಪೆಕ್ಟರ್, ಇಬ್ಬರು ಸಬ್ ಇನ್ಸ್ಪೆಕ್ಟರ್, ಐವರು ಎಎಸ್ಐ ಸೇರಿದಂತೆ ಸುಮಾರು 60 ಪೊಲೀಸ್ ಕುಟುಂಬಗಳು ವಾಸವಿವೆ. ಆದರೆ ಕಸದ ರಾಶಿ, ಗುಜರಿ ವಾಹನಗಳ ಮೆರೆದಾಟದಲ್ಲಿ ‘ಇದೇನ್ರೀ ಪೊಲೀಸ್ರು ಇಂಥ ಸ್ಥಿತೀಲಿ ಬದುಕ್ತಿದ್ದಾರೆ’ ಎಂದು ಊರಿನ ಜನ ಆಡಿಕೊಳ್ಳುವಂತಾಗಿದೆ.
ಕ್ವಾಟರ್ಸ್ ಆವರಣದಲ್ಲಿರುವ ನಲ್ಲಿಗೆ ನೀರು ಸರಬರಾಜಾಗುತ್ತಿಲ್ಲ. ಟ್ಯಾಂಕರ್ ನೀರನ್ನು ಖರೀದಿಸಿ ಕಾಲ ತಳ್ಳುತ್ತಿದ್ದಾರೆ. ಶಿಥಿಲವಾಗಿರುವ ಕಾಂಪೌಂಡ್ ಹಲವೆಡೆ ಬಿದ್ದು ಹೋಗಿದೆ. ಪಾರ್ಥೇನಿಯಂ ಹಾಗೂ ಕಳೆಗಿಡಗಳು ಸಾಕಷ್ಟು ಬೆಳೆದಿರುವುದರಿಂದ ಹಾವುಗಳೂ ಓಡಾಡುತ್ತಿವೆ. ಮಕ್ಕಳು ಆಡುವಾಗ ಬೀದಿನಾಯಿಗಳ ಕಾಟದ ಜೊತೆಗೆ ವಾಹನಗಳ ಭಯವೂ ಇದೆ.
‘ನಮ್ಮ ಮನೆಯವರು ಜನಸೇವಕರಾಗಿ ಖಾಕಿ ಬಟ್ಟೆ ತೊಟ್ಟುಕೊಂಡು ಹಗಲಿರುಳೂ ಕಾನೂನು ರಕ್ಷಣೆಗಾಗಿ ದುಡಿಯುತ್ತಾರೆ. ಆದರೆ ಮೂಲ ಸೌಕರ್ಯ ಕೊರತೆಯಿಂದ ನಾವು ಇಲ್ಲಿ ಕಷ್ಟಪಡುತ್ತಿದ್ದೇವೆ. ಕಾಂಪೌಂಡ್ ನಿರ್ಮಿಸುವುದರ ಜೊತೆಗೆ ನೀರಿನ ಸೌಲಭ್ಯ ಒದಗಿಸಿಕೊಡಬೇಕು. ಕಾಂಪೌಂಡ್ ಒಳಗಿನ ಕಳೆಗಿಡ ನಿರ್ಮೂಲನೆಗೆ ಮತ್ತು ಬೀದಿ ದೀಪಕ್ಕೆ ಪುರಸಭೆ ಗಮನ ಹರಿಸಬೇಕು’ ಎನ್ನುತ್ತಾರೆ ಪೊಲೀಸ್ ಕ್ವಾಟರ್ಸ್ನ ಮಹಿಳೆಯೊಬ್ಬರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.