ADVERTISEMENT

ಜನರಿಗೆ ಹಣ, ಸೀರೆ ಆಮಿಷ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 8:17 IST
Last Updated 13 ಜನವರಿ 2018, 8:17 IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪರಿವರ್ತನಾ ಯಾತ್ರೆಗೆ ಹಣ ಮತ್ತು ಸೀರೆ ಹಂಚಿ ಜನರನ್ನು ಸೆಳೆಯಲಾಗಿತ್ತು ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತಹ ದೃಶ್ಯಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇಂತಹ ದೃಶ್ಯವೊಂದರಲ್ಲಿ ಗೌರಿಬಿದನೂರಿನಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದ ಪಕ್ಕದಲ್ಲೇ ಬಿಜೆಪಿ ಮುಖಂಡರು ಕಾರ್ಯಕ್ರಮಕ್ಕೆ ಬಂದವರಿಗೆ ಹಣ ಹಂಚುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕ ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪರಸ್ಥಳದಿಂದ ಬಂದಿದ್ದ ಮಹಿಳೆಯರು ಬಿಳಿ ಹಾಳೆಯ ಟೋಕನ್‌ಗಳು ಹಿಡಿದು ಬಿ.ಬಿ.ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಅವರ ನ್ಯೂ ನ್ಯೂ ಹಾರಿಜನ್ ಶಾಲೆ ಬಳಿ ನೆರೆದಿದ್ದರು.

ಈ ಪೈಕಿ ಆವಲಗುರ್ಕಿಯಿಂದ ಬಂದಿದ್ದ ವನಜಾಕ್ಷಿ ಎಂಬುವರನ್ನು ವಿಚಾರಿಸಿದರೆ, ‘ಸೀರೆ, ಹಣ ನೀಡುವುದಾಗಿ ಹೇಳಿ ಟೋಕನ್‌ ಕೊಟ್ಟು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದರು. ಇದೀಗ ಅವುಗಳನ್ನು ಪಡೆದುಕೊಳ್ಳಲು ಬಂದಿದ್ದೇವೆ’ ಎಂದು ಹೇಳಿದರು.

ADVERTISEMENT

ಕೈಕೊಟ್ಟ ಕರೆಂಟ್, ಡೈಲಾಗ್ ಹೊಡೆದ ಸಾಯಿಕುಮಾರ್

ಬಾಗೇಪಲ್ಲಿ: ಪರಿವರ್ತನಾ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮುಖಂಡ ಅರಿಕೇರಿ ಸಿ.ಕೃಷ್ಣಾರೆಡ್ಡಿ ಅವರು ಮಾತನಾಡುವ ವೇಳೆ ವಿದ್ಯುತ್ ಕಡಿತಗೊಂಡಿತು. ಈ ವೇಳೆ ನೆರೆದಿದ್ದ ಜನರಲ್ಲಿ ಗುಸುಗುಸು ಕೇಳಿ ಬರಲು ಆರಂಭಿಸಿತು. ಇದೇ ವೇದಿಕೆಯಲ್ಲಿ ಮುಖಂಡ, ನಟ ಪಿ.ಸಾಯಿಕುಮಾರ್ ಅವರು ಕೆಲ ಡೈಲಾಗ್‌ಗಳನ್ನು ಹೇಳಿ ಜನರನ್ನು ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.