ಗೌರಿಬಿದನೂರು: ತಾಲ್ಲೂಕು ತೊಂಡೇಬಾವಿ ಹೋಬಳಿಯ ಅಲ್ಲೀಪುರದಲ್ಲಿ ಭಾನುವಾರ ಒಂದೇ ದಿನ 55 ಮಂದಿಗೆ ಕೊರೊನಾ ದೃಢವಾಗಿದೆ. ಇಡೀ ಗ್ರಾಮವನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗಿದೆ.
ಕಳೆದ ವಾರ ಕೊವಿಡ್–19 ಸೋಂಕಿತ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಜುಲೈ 11ರಂದು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವ 100ಕ್ಕೂ ಹೆಚ್ಚು ಮಂದಿಯ ಗಂಟಲುಸ್ರಾವವನ್ನು ಆರೋಗ್ಯ ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದರು. ಇದರ ಫಲಿತಾಂಶ ಭಾನುವಾರ ಬಂದಿದ್ದು, ಇದರಲ್ಲಿ ಸುಮಾರು 55 ಮಂದಿಗೆ ಕೋವಿಡ್ ಸೋಂಕು ಹರಡಿರುವುದು ದೃಢವಾಗಿದೆ.
ಒಂದೇ ಹಳ್ಳಿಯಲ್ಲಿ ಇಷ್ಟೊಂದು ಪಾಸಿಟಿವ್ ಪ್ರಕರಣಗಳು ದೃಢವಾಗಿರುವ ಮಾಹಿತಿಯು ತಾಲ್ಲೂಕು ಆಡಳಿತಕ್ಕೆ ಮತ್ತಷ್ಟು ತಲೆನೋವಾಗಿದೆ.
ಭಾನುವಾರ ತಹಶೀಲ್ದಾರ್ ಎಂ.ರಾಜಣ್ಣ, ಕೋವಿಡ್ ನೋಡಲ್ ಅಧಿಕಾರಿ ತೇಜಾನಂದರೆಡ್ಡಿ, ತಾಲ್ಲೂಕು ಆರೋಗ್ಯ ಅಧಿಕಾರಿ ಓ.ರತ್ನಮ್ಮ, ಪಿಎಸೈ ಲಕ್ಷ್ಮಿನಾರಾಯಣ, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಲೀಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಿ ಲಾಕ್ಡೌನ್ ವೇಳೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ಕುಮಾರ್ ಅಲೀಪುರಕ್ಕೆ ಭೇಟಿ ಮಾಡಿ ಕೋವಿಡ್ ಕೇರ್ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿ, ಜನರು ಕೋವಿಡ್ ಬಗ್ಗೆ ಜಾಗೃತಿ ವಹಿಸುವಂತೆ ಮನವಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.