ಚಿಂತಾಮಣಿ: ‘ರಾಜ್ಯದ ಯಾವುದೇ ತಾಲ್ಲೂಕು ಕೇಂದ್ರದಲ್ಲಿ ಇಲ್ಲದ ವಿಶಿಷ್ಟ ರೀತಿಯ ಅಂಬೇಡ್ಕರ್ ಭವನವನ್ನು ಹಾಗೂ ಅದರ ಮುಂದೆ ಅತ್ಯುತ್ತಮ ಅಂಬೇಡ್ಕರ್ ಪ್ರತಿಮೆ ನಿರ್ಮಾಣವನ್ನು ಸಹಿಸದೆ ಮಾಜಿ ಶಾಸಕ ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ರಾತ್ರೋರಾತ್ರಿ ತಂದಿರಿಸುವ ಮೂಲಕ ರಾಜಕೀಯ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಆರೋಪಿಸಿದರು.
ಸರ್ಕಾರಿ ಶಾಲೆ ಆವರಣದಲ್ಲಿ ರಾತ್ರೋರಾತ್ರಿ ತಂದಿಟ್ಟಿದ್ದ ಅಂಬೇಡ್ಕರ್ ಪುತ್ಥಳಿಯನ್ನು ತಾಲ್ಲೂಕು, ಜಿಲ್ಲಾಡಳಿತ ಸ್ಥಳಾಂತರ ಮಾಡಿದ್ದು, ಅದನ್ನು ಪ್ರತಿಭಟಿಸಿ ಕೆಲವು ಸಂಘಟನೆಗಳು ನಗರ ಬಂದ್ ಮಾಡಿದ್ದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
‘ಮಾಜಿ ಶಾಸಕರು ಕಳೆದ 10 ವರ್ಷಗಳಿಂದ ಅಂಬೇಡ್ಕರ್ ಭವನ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಯಾವುದೋ ಒಂದು ಕಟ್ಟಡ ಕಟ್ಟಿ, ಪ್ರತಿಮೆಯನ್ನು ತಂದಿಟ್ಟು ರಾಜಕೀಯ ಲಾಭ ಪಡೆದುಕೊಳ್ಳಲು ಯೋಚಿಸಿದ್ದರು. ಆದರೆ ಅದು ಕೈಗೂಡಲಿಲ್ಲ’ ಎಂದರು.
‘ಚುನಾವಣೆಯಲ್ಲಿ ಜಯಗಳಿಸಿದ ನಂತರ ಅಂಬೇಡ್ಕರ್ ಭವನಕ್ಕೆ ನೂತನ ವಿನ್ಯಾಸ ರೂಪಿಸಿ ₹9 ಕೋಟಿ ಮಂಜೂರು ಮಾಡಿಸಿದೆ. ಕಾಮಗಾರಿ ಆರಂಭವಾಗಿದ್ದು ಭರದಿಂದ ಸಾಗುತ್ತಿದೆ. ಭವನದ ಮುಂದೆ ಅತ್ಯುತ್ತಮವಾದ ಅಂಬೇಡ್ಕರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಯೋಜನೆ ರೂಪಿಸಲಾಗಿದೆ. ಇದನ್ನು ಸಹಿಸಲಾಗದೆ ನನಗೆ ಹೆಸರು ಬರುತ್ತದೆ ಎನ್ನುವ ದುರುದ್ದೇಶದಿಂದ ಸಂಚನ್ನು ರೂಪಿಸಿ, ತನ್ನ ಹಿಂಬಾಲಕರ ಮೂಲಕ ಆಟ ಆಡಿಸುತ್ತಿದ್ದಾರೆ’ ಎಂದು ದೂರಿದರು.
‘ರಾಷ್ಟ್ರೀಯ ನಾಯಕರ ಪ್ರತಿಮೆ ಸ್ಥಾಪಿಸಲು ಕಾನೂನು ಪ್ರಕಾರ ಅನುಮತಿ ಪಡೆದುಕೊಳ್ಳಬೇಕು. ಯಾವುದೇ ಅನುಮತಿಯನ್ನು ಪಡೆದುಕೊಳ್ಳದೆ ಹೊರಗಿನವರ ಮೂಲಕ ರಾತ್ರೋರಾತ್ರಿ ಅಂಬೇಡ್ಕರ್ ಪ್ರತಿಮೆಯನ್ನು ತಂದಿರಿಸಿ ಅವಮಾನ ಮಾಡಿದ್ದು ಸರಿಯೇ’ ಎಂದು ಪ್ರಶ್ನಿಸಿದರು.
‘ರಾಜಕೀಯವಾಗಿ ನನ್ನ ಮೇಲೆ ಎಷ್ಟೇ ಆರೋಪ ಮಾಡಿದರೂ ತಾಳ್ಮೆಯಿಂದ ಸಹಿಸಿಕೊಂಡಿದ್ದೇನೆ. ತಾಲ್ಲೂಕು ಮತ್ತು ಜಿಲ್ಲಾಡಳಿತವು ಸಹ ಸಮಾಧಾನವಾಗಿ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನ ನಡೆಸಿದ್ದಾರೆ. ಕೊನೆಗೆ ನ್ಯಾಯಾಲಯದ ಆದೇಶವನ್ನು ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಪ್ರತಿಮೆಯನ್ನು ಸ್ಥಳಾಂತರಿಸಲಾಗಿದೆ’ ಎಂದರು.
‘ಎಲ್ಲವನ್ನು ರಾಜಕೀಯ ಮಾಡಿ ಜಾತಿ ಜಾತಿಗಳ ನಡುವೆ ಕಿಚ್ಚು ಹತ್ತಿಸಲು ಪ್ರಯತ್ನ ಮಾಡುತ್ತಿರುವವರಿಗೆ ದೇವರು ಒಳ್ಳೆಯದು ಮಾಡಲಿ. ಯಾರು ಅಂಬೇಡ್ಕರ್ ವಿರೋಧಿಗಳು, ಅಂಬೇಡ್ಕರ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಜನರಿಗೆ ಅರಿವಾಗುತ್ತದೆ. ಸಂವಿಧಾನಶಿಲ್ಪಿಗೆ ವಿಶೇಷ ಗೌರವ ನೀಡುವ ಉದ್ದೇಶದಿಂದ ಅತ್ಯುತ್ತಮ ಅಂಬೇಡ್ಕರ್ ಭವನ, ಅದರ ಮುಂದೆ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡುತ್ತಿರುವಾಗ ಉದ್ದೇಶಪೂರ್ವಕವಾಗಿ ಅದನ್ನು ಕೆಡಿಸುವ ಸಂಚು ನಡೆಯುತ್ತಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.