ಚಿಂತಾಮಣಿಯಲ್ಲಿ ಬುಧವಾರ ಪೊಲೀಸರು ಪಥಸಂಚಲನ ನಡೆಸಿದರು
ಚಿಂತಾಮಣಿ: ನಗರದಲ್ಲಿ 144ನೇ ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿದ್ದು ಯಾವುದೇ ಬಂದ್ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾ ಹೆಚ್ಚುವರಿ ಎಸ್ಪಿ ಜಗನ್ನಾಥ ರೈ ತಿಳಿಸಿದರು.
ನಗರದಲ್ಲಿ ಬುಧವಾರ ಸಂಜೆ ನಡೆದ ಪೊಲೀಸ್ ಪಥಸಂಚಲನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ತಾಲ್ಲೂಕು ದಂಡಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದಾರೆ. 4 ಜನ ಮೇಲ್ಪಟ್ಟು ಅಕ್ರಮಕೂಟ, ಮೆರವಣಿಗೆ, ಧರಣಿ, ಬಂದ್ ಮಾಡಲು ಅವಕಾಶವಿಲ್ಲ. ಆ ರೀತಿ ಯಾರಾದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಪ್ರಕರಣ ದಾಖಲಿಸಿ ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು ಎಂದರು.
ಕೆಲವರು ಬಂದ್ ನಡೆಸಲು ಅನುಮತಿ ಕೋರಿ ಮನವಿ ನೀಡಿದ್ದರು. ಕಾನೂನಿನಂತೆ ಬಂದ್ಗೆ ಅವಕಾಶವಿಲ್ಲ ಎಂದು ಹಿಂಬರಹ ನೀಡಲಾಗಿದೆ. ಅವರ ಅಹವಾಲು, ಬೇಡಿಕೆ ಇದ್ದರೆ ಕಾನೂನಿನ ಅಡಿಯಲ್ಲಿ ಹೋರಾಟ ನಡೆಸಲಿ ಎಂದರು.
ಪಥಸಂಚಲನ: ನಗರದಲ್ಲಿ ಕೆಲವು ಸಂಘಟನೆಗಳು ನಾಳೆ ಬಂದ್ಗೆ ಕರೆ ನೀಡಿರುವ ಕಾರಣ 200ಕ್ಕೂ ಹೆಚ್ಚು ಪೊಲೀಸರು ನಗರದಲ್ಲಿ ಪಥಸಂಚಲನ ನಡೆಸಿದರು. ನಗರದ ಬೆಂಗಳೂರು ವೃತ್ತದಿಂದ ಮಾರುತಿ ವೃತ್ತ, ಗಜಾನನ ವೃತ್ತ, ಎಂ.ಜಿ.ರಸ್ತೆ, ಪಿಸಿಆರ್ ಕಾಂಪ್ಲೆಕ್ಸ್, ಚೇಳೂರು ವೃತ್ತ, ಕೋಲಾರ ರಸ್ತೆ ಮತ್ತಿತರ ಕಡೆ ಸಂಚರಿಸಿದರು.
ಡಿವೈಎಸ್ಪಿ ಮುರಳೀಧರ್, ನಗರ ಠಾಣೆ ಇನ್ಸ್ಪೆಕ್ಟರ್ ವಿಜಿಕುಮಾರ್, ಶಿಡ್ಲಘಟ್ಟ ಇನ್ಸ್ಪೆಕ್ಟರ್ ಶ್ರೀನಿವಾಸ್ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.