ADVERTISEMENT

ಜಾನುವಾರುಗಳ ಮೂಕ ವೇದನೆ

ಎಂಟು ವರ್ಷಗಳಾದರೂ ವೈದ್ಯರು ಬರಲೇ ಇಲ್ಲ; ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 2:22 IST
Last Updated 18 ಡಿಸೆಂಬರ್ 2020, 2:22 IST
ಚೇಳೂರು ಪಶು ಆಸ್ಪತ್ರೆ
ಚೇಳೂರು ಪಶು ಆಸ್ಪತ್ರೆ   

ಚೇಳೂರು: ಇಲ್ಲಿನ ಪಶು ಚಿಕಿತ್ಸಾಲಯ ಕೇಂದ್ರ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ವೈದ್ಯಾಧಿಕಾರಿಯೂ ಇಲ್ಲದೇ ರೈತರು ಜಾನುವಾರುಗಳ ಚಿಕಿತ್ಸೆಗೆ ಪರದಾಡುವಂತಾಗಿದೆ.

ತಾಲ್ಲೂಕಿನ ನಲ್ಲಗುಟ್ಲಪಲ್ಲಿ, ಪಾಳ್ಯಕೆರೆ, ಚೇಳೂರು ಗ್ರಾಮ ಪಂಚಾಯಿತಿಗಳಲ್ಲಿ 56ಕ್ಕೂ ಹೆಚ್ಚು ಗ್ರಾಮಗಳಿವೆ. ಈ ಪಶು ಚಿಕಿತ್ಸಾಲಯ ಕೇಂದ್ರದಲ್ಲಿ ಔಷಧಗಳ ಸಮಸ್ಯೆ, ವೈದ್ಯರ ಕೊರತೆ, ಸಾಮಗ್ರಿಗಳ ಕೊರತೆ ಸೇರಿದಂತೆ ನಾನಾ ಸೌಲಭ್ಯಗಳಿಂದ ವಂಚಿತವಾಗಿದೆ.

ಜಾನುವಾರುಗಳು ಕಾಯಿಲೆಯಿಂದ ಬಳಲಿದರೆ, ರೈತರು ಕಾಂಪೌಂಡರ್‌ನನ್ನೇ ನೆಚ್ಚಿಕೊಂಡು ಚಿಕಿತ್ಸೆಗೆ ಕರೆತರಬೇಕಾಗಿದೆ. ಕಾಂಪೌಂಡರೂ ಇಲ್ಲದಿದ್ದರೆ ಬರಿಗೈಲಿ ಮರಳಬೇಕಾಗಿದೆ. ಪಟ್ಟಣ ಹೋಗಿ ನೂರಾರು ಖರ್ಚು ಮಾಡಿ ಜಾನುವಾರುಗಳಿಗೆ ಚಿಕಿತ್ಸೆ ಮಾಡಿಸಬೇಕಾಗುತ್ತದೆ ಎಂದು ರೈತರು ಆರೋಪಿಸಿದ್ದಾರೆ.

ADVERTISEMENT

‘ಎಂಟು ವರ್ಷಗಳಾದರೂ ಪಶು ಆಸ್ಪತ್ರೆ ವೈದ್ಯಾಧಿಕಾರಿಗಳಿಲ್ಲದೇ ಜಾನುವಾರುಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಪಶು ಆಸ್ಪತ್ರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು ಅನೇಕ ಸಲ ಮನವಿ ನೀಡಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಪ್ರಭಾರಿ ವೈದ್ಯಾಧಿಕಾರಿಗಳನ್ನು ಹಾಕಿದರೂ ಅವರು ವಾರಕ್ಕೊಮ್ಮೆಯೂ ಬರುವುದಿಲ್ಲ’ ಎಂದು ಗ್ರಾಮಸ್ಥರು ದೂರಿದರು.

‘ರೋಗ ಬಂದು ಅನೇಕ ಕುರಿ-ಮೇಕೆಗಳು ಮರಣಹೊಂದಿದರೂ, ಯಾವೊಬ್ಬ ಪಶು ವೈದ್ಯಾಧಿಕಾರಿಯೂ ಬಂದು ನೋಡಲಿಲ್ಲ. ಇಲ್ಲಿ ಮೂಕ ಜೀವಿಗಳ ಆಕ್ರಂದನ ನೋಡುವವರಿಲ್ಲ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.