ಗೌರಿಬಿದನೂರು: ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಸುರೇಶ್ ಹಾಗೂ ಇತರ ಅಧಿಕಾರಿಗಳು ಪೌರಕಾರ್ಮಿಕರ ಸಹಕಾರದೊಂದಿಗೆ ಪಿನಾಕಿನಿ ನದಿ ಪಾತ್ರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಹಂತ
ಹಂತವಾಗಿ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.
ನಗರದ ಸಮೀಪದಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆಯಾಗಿದೆ. ಇದರಿಂದಾಗಿ ಪಿನಾಕಿನಿ ನದಿಯು ತ್ಯಾಜ್ಯದ ಕೂಪವಾಗಿದ ಎಂಬ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಡಿಸೆಂಬರ್ 13ರಂದು 'ಪಿನಾಕಿನಿ ಒಡಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯ' ಶೀರ್ಷಿಕೆಯಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು.
ವರದಿಯ ಪರಿಣಾಮವಾಗಿ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಸ್ವಚ್ಛತೆ ಕಾರ್ಯ ಆರಂಭಿಸಿದ್ದಾರೆ.
ನಗರಸಭೆ ಆಯುಕ್ತ ವಿ.ಸತ್ಯನಾರಾಯಣ ಮಾತನಾಡಿ, ‘ಪಿನಾಕಿನಿಯ ಒಡಲಲ್ಲಿ ತ್ಯಾಜ್ಯ ತುಂಬಿರುವ ಬಗ್ಗೆ ಅನೇಕ ಬಾರಿ ನಾಗರಿಕರು ತಿಳಿಸಿದ್ದರು. ಈ ವಿಚಾರವಾಗಿ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಬಳಿಕ ಮೊದಲ ಹಂತವಾಗಿ ಸೇತುವೆಯ ಕೆಳಭಾಗದಲ್ಲಿ ಹಾಗೂ ಎರಡನೇ ಹಂತವಾಗಿ ಸೇತುವೆಯ ಮೇಲ್ಭಾಗದಲ್ಲಿ ನದಿಯಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲು ಮುಂದಾಗಿದ್ದೇವೆ. ನದಿಯಲ್ಲಿ ಇನ್ನು ನೀರು ಹರಿಯುತ್ತಿದ್ದು ಜತೆಗೆ ನಿಂತ ನೀರಿನಲ್ಲಿ ಸೀಮೆಜಾಲಿ ಮುಳ್ಳುಗಳು ಇರುವ ಕಾರಣ ತ್ಯಾಜ್ಯ ತೆರವಿಗೆ ಅಡಚಣೆಯಾಗುತ್ತಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಸಂಪೂರ್ಣವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.