ಚಿಕ್ಕಬಳ್ಳಾಪುರ: ನಗರ ಹೊರವಲಯದ ಚದುಲಪುರ ಕ್ರಾಸ್ನಲ್ಲಿ ಗುರುವಾರ ಬೆಳಿಗ್ಗೆ ಕಂಟೈನರ್ ಲಾರಿಯೊಂದು ಹೆದ್ದಾರಿ ಬದಿ ನಿಂತಿದ್ದ ಎರಡು ಕಾರು, ಒಂದು ಬೈಕ್ಗೆ ಡಿಕ್ಕಿ ಹೊಡೆದು ಹೊಟೇಲ್ಗೆ ನುಗ್ಗಿದ ಘಟನೆಯಲ್ಲಿ ಐದು ಜನರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಗವಿಗಾನಹಳ್ಳಿ ನಿವಾಸಿಗಳಾದ ವಕೀಲ ಯಮುನಾಚಾರ್ (44), ಚಿಕ್ಕಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಗುಮಾಸ್ತ ಎಚ್.ವಿ. ವೆಂಕಟೇಶ್ (45), ಟಾಟಾ ನೆಕ್ಸಾನ್ ಕಾರಿನಲ್ಲಿದ್ದ ಬೆಂಗಳೂರಿನ ಬಾಣಸವಾಡಿ ನಿವಾಸಿ ಕಲಾಂಜಿಯಂ (47), ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗಪುರದ ನಿವಾಸಿ ನಿತೇಶ್ ಗೌಡ (25) ಮತ್ತು ಶ್ರೀನಿವಾಸಪುರದ ಕಾರ್ಮಿಕ ರಂಗಪ್ಪ (55) ಮೃತಪಟ್ಟಿದ್ದಾರೆ.
ಹರಿಯಾಣ ಮೂಲದ ಕಂಟೈನರ್ ಲಾರಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬೆಂಗಳೂರಿನಿಂದ ಹೈದರಾಬಾದ್ನತ್ತ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ 6 ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದರು.
ಅಜಾಗರೂಕತೆಯಿಂದ ವೇಗವಾಗಿ ಲಾರಿ ಓಡಿಸುತ್ತಿದ್ದ ಚಾಲಕ ಚದುಲಪುರ ಕ್ರಾಸ್ ಬಳಿ ರಸ್ತೆ ಉಬ್ಬಿನ ಬಳಿ ಲಾರಿ ನಿಯಂತ್ರಿಸಲು ವಿಫಲವಾದ ಪರಿಣಾಮ ಈ ಅಪಘಾತ ಸಂಭವಿಸಿದೆ. ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.