ADVERTISEMENT

ರಾಸು ವಿಮಾ ಚೆಕ್‌ ವಿತರಣೆ

52 ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 3:29 IST
Last Updated 7 ಮಾರ್ಚ್ 2021, 3:29 IST
ಚಿಕ್ಕಬಳ್ಳಾಪುರದಲ್ಲಿ ಕೋಚಿಮುಲ್ ನಿರ್ದೇಶಕ ಎನ್‌.ಸಿ.ವೆಂಕಟೇಶ್ ರೈತರಿಗೆ ರಾಸು ವಿಮಾ ಯೋಜನೆಯ ಚೆಕ್‌ಗಳನ್ನು ವಿತರಿಸಿದರು
ಚಿಕ್ಕಬಳ್ಳಾಪುರದಲ್ಲಿ ಕೋಚಿಮುಲ್ ನಿರ್ದೇಶಕ ಎನ್‌.ಸಿ.ವೆಂಕಟೇಶ್ ರೈತರಿಗೆ ರಾಸು ವಿಮಾ ಯೋಜನೆಯ ಚೆಕ್‌ಗಳನ್ನು ವಿತರಿಸಿದರು   

ಚಿಕ್ಕಬಳ್ಳಾಪುರ: ‌ಇಲ್ಲಿನ ಮೆಗಾಡೇರಿಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ರಾಸು ವಿಮಾ ಯೋಜನೆಯ ಚೆಕ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೋಚಿಮುಲ್ ನಿರ್ದೇಶನ ಎನ್‌.ಸಿ. ವೆಂಕಟೇಶ್, ‘ಹೈನುಗಾರರ ರಾಸುಗಳಿಗೆ ಈ ಮೊದಲು ವರ್ಷಕ್ಕೆ ಒಂದು ಬಾರಿ ಮಾತ್ರ ಒಕ್ಕೂಟದಿಂದ ವಿಮಾ ಸೌಲಭ್ಯ ಒದಗಿಸಲಾಗುತ್ತಿತ್ತು. ಆದರೆ ಒಕ್ಕೂಟಕ್ಕೆ ನೂತನ ಮಂಡಳಿ ರಚನೆಯಾದ ಬಳಿಕ ವರ್ಷದಲ್ಲಿ ಎರಡು ಬಾರಿ ರಾಸು ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.

ರೈತರು ಹೊಸದಾಗಿ ಮಧ್ಯಂತರ ವರ್ಷದಲ್ಲಿ ಹಸು ಖರೀದಿಸಿದರೆ ಅಥವಾ ಚಿಕ್ಕಕರುಗಳು ಪಡ್ಡೆಗಳಾದರೆ ರಾಸು ವಿಮೆಗಾಗಿ ಒಂದು ವರ್ಷದ ಅವಧಿಯವರೆಗೆ ಕಾಯಬೇಕಾಗಿತ್ತು. ಆಕಸ್ಮಿಕವಾಗಿ ರಾಸು ವಿಮೆ ಇಲ್ಲದ ಹಸು ಮರಣ ಹೊಂದಿದಲ್ಲಿ ಯಾವುದೇ ಪರಿಹಾರ ದೊರೆಯುತ್ತಿರಲಿಲ್ಲ. ಈ ಎಲ್ಲವನ್ನೂ ಮನಗಂಡು ವರ್ಷದಲ್ಲಿ ಎರಡು ಬಾರಿ ರಾಸು ವಿಮೆ ಒದಗಿಸಲಾಗುತ್ತಿದೆ. ರೈತರು ಈ ಅವಕಾಶ ಬಳಸಿಕೊಳ್ಳಬೇಕು ಎಂದು ಕೋರಿದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಕೃತಕ ಗರ್ಭಧಾರಣೆಯಿಂದ ಹೆಣ್ಣು ಕರುಗಳನ್ನು ಪಡೆಯುವ ಯೋಜನೆಯನ್ನು ಒಕ್ಕೂಟದಿಂದ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಶೇ 75ರಷ್ಟು ರಿಯಾಯಿತಿಯಲ್ಲಿ ಒದಗಿಸುವುದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.

52 ರಾಸುಗಳ ಪಲಾನುಭವಿಗಳಿಗೆ ₹ 31.40 ಲಕ್ಷದ ಚೆಕ್‌ಗಳನ್ನು ಹಾಗೂ ಕೋಮುಲ್ ವಿಮಾ ಯೋಜನೆಯಡಿ ನೋಂದಾಯಿಸಿಕೊಂಡಿರುವ ಸದಸ್ಯರು ಮರಣ ಹೊಂದಿದರೆ ಮರಣ ಪರಿಹಾರವಾಗಿ ಪಾವತಿಸುವ ₹ 1 ಲಕ್ಷ ಮೌಲ್ಯದ ಚೆಕ್ ವಿತರಿಸಲಾಯಿತು.

ಚಿಕ್ಕಬಳ್ಳಾಪುರ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಿ.ಕೆ. ಶಿವಕುಮಾರ್, ವಿಸ್ತರಣಾಧಿಕಾರಿಗಳಾದ ಎಸ್.ಎನ್. ರಮೇಶ್‍ಬಾಬು, ಕೆ.ಎನ್. ಸದಾಶಿವ, ಡಿ. ಮಂಜುನಾಥ, ಎನ್. ಸತ್ಯನಾರಾಯಣ, ಎಂ.ಯು. ಮಂಜುಳಾ ಮತ್ತು ಪಾಪಣ್ಣ, ವಿಎಂಪಿಸಿಎಸ್ ನೌಕರ ಸಂಘದ ಪದಾಧಿಕಾರಿ ದೇವರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.