ಬಾಗೇಪಲ್ಲಿ: ಪಟ್ಟಣದ ನಿವಾಸಿಗಳಾಗಿದ್ದ ಅನಿವಾಸಿ ಭಾರತೀಯರಾದ ಎಂ.ಸುನೀತ, ಸುಧೀಂದ್ರರೆಡ್ಡಿ ದಂಪತಿ ತಾಲ್ಲೂಕಿನ ಚಿನ್ನಂಪಲ್ಲಿ ಗ್ರಾಮದಲ್ಲಿನ ಮೂವರು ಅಂಧರಿಗೆ ನೆರವಾಗಿದ್ದರೆ. ₹10 ಸಾವಿರ ನಗದು ರವಾನಿಸಿ ಮಾನವೀಯ ಮರೆದಿದ್ದಾರೆ. ಕಣ್ಣಿನ ಚಿಕಿತ್ಸೆಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಅಂಧರಾದ ರಾಮಕೃಷ್ಣಾರೆಡ್ಡಿ, ಮಂಜುನಾಥರೆಡ್ಡಿ, ರತ್ನಮ್ಮ ಅವರ ಬಗ್ಗೆ ಡಿ.2ರಂದು ‘ನೆರವಿಗೆ ಕುಟುಂಬದ ಅಲೆದಾಟ’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.
ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಸುನೀತಾ ಇದೀಗ ನ್ಯೂಜೆರ್ಸಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿನ್ನಂಪಲ್ಲಿ ಗ್ರಾಮದ ಹುಟ್ಟು ಅಂಧರ ಸುದ್ದಿಯನ್ನು ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ.ಟಿ. ವೀರಾಂಜನೇಯ ಸಾಮಾಜಿಕ ಜಾಲತಾಣಗಳ ಮೂಲಕ ಅವರಿಗೆ ರವಾನಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ದಂಪತಿ, ವೀರಾಂಜನೇಯರವರ ಬ್ಯಾಂಕಿನ ಖಾತೆಗೆ ₹10 ಸಾವಿರ ವರ್ಗಾಯಿಸಿ, ಅಂಧರಿಗೆ ನೀಡಲು ತಿಳಿಸಿದ್ದಾರೆ.
ವೀರಾಂಜನೇಯ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ಅವರು ಅಂಧರಾದ ರಾಮಕೃಷ್ಣಾರೆಡ್ಡಿ, ಮಂಜುನಾಥರೆಡ್ಡಿ, ರತ್ನಮ್ಮರವರಿಗೆ ನಗದನ್ನು ರವಾನಿಸಿದರು. ವೀರಾಂಜನೇಯ 2 ಮೂಟೆ ಅಕ್ಕಿ ಹಾಗೂ ಪತ್ರಕರ್ತ ಸುಬ್ಬು 7 ಅಕ್ಕಿ ಮೂಟೆಗಳನ್ನು ವಿತರಿಸಿದರು.
‘ನಾವು ಮೂವರು ಹುಟ್ಟು ಅಂಧರು. ಜೀವನ ಸಾಗಿಸಲು ಕಷ್ಟ ಇದೆ. ಅಪ್ಪ-ಅಮ್ಮ ವೃದ್ಧರಾಗಿದ್ದಾರೆ. ಕೂಲಿ ಕೆಲಸ ಮಾಡಲು ಆಗುವುದಿಲ್ಲ. ನಮಗೆ ಊಟ-ವಸತಿಗೆಪರದಾಟ ಆಗಿದೆ. ಅಂಧರಿಗೆ ನೆರವು ನೀಡಿ ಎಂದು ಮಾಧ್ಯಮದಲ್ಲಿ ಪ್ರಕಟವಾಗಿತ್ತು. ದಾನಿಗಳು ನಮಗೆ ನೆರವು ನೀಡುತ್ತಿದ್ದಾರೆ. ಶಾಶ್ವತವಾದ ಪರಿಹಾರ ಅಗತ್ಯ ಇದೆ. ಜೊತೆಗೆ ಕಣ್ಣಿನ ತಪಾಸಣೆ ಹಾಗೂ ಪರೀಕ್ಷೆ ಮಾಡಬೇಕಾಗಿದೆ’ ಎಂದು ಅಂಧ ರಾಮಕೃಷ್ಣಾರೆಡ್ಡಿ, ರತ್ನಮ್ಮ ಮನವಿ ಮಾಡಿದರು.
‘ತಾಲ್ಲೂಕಿನ ನೇತ್ರ ತಜ್ಞರ ತಂಡ ಹಾಗೂ ವೈದ್ಯರನ್ನು ಕರೆಯಿಸಿ ಪರೀಕ್ಷೆ ಮಾಡಿಸುತ್ತೇನೆ. ಅಗತ್ಯವಾದ ನೆರವು ಕಲ್ಪಿಸಲಾಗುವುದು’ ಎಂದು ಡಾ. ಸತ್ಯನಾರಾಯಣರೆಡ್ಡಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.