ADVERTISEMENT

ರೈತರ ಜಮೀನಿಗೆ ಬೇಲಿ: ಆಕ್ಷೇಪ

ಅರಣ್ಯ ಇಲಾಖೆ ನಡೆಗೆ ಆಕ್ರೋಶ: 16 ಹಳ್ಳಿಯ ರೈತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:36 IST
Last Updated 28 ಮಾರ್ಚ್ 2023, 5:36 IST
ಶಿಡ್ಲಘಟ್ಟದಲ್ಲಿ ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ರೈತರು ಮನವಿಪತ್ರ ಸಲ್ಲಿಸಿದರು
ಶಿಡ್ಲಘಟ್ಟದಲ್ಲಿ ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ರೈತರು ಮನವಿಪತ್ರ ಸಲ್ಲಿಸಿದರು   

ಶಿಡ್ಲಘಟ್ಟ: ಹಲವು ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿರುವ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ತನಗೆ ಸೇರಿದೆ ಎಂದು ಬೇಲಿ ಅಳವಡಿಸುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಸಾದಲಿ ಹೋಬಳಿಯ ಮೀಸಲು ಅರಣ್ಯ ವ್ಯಾಪ್ತಿಯ ಸುಮಾರು 16 ಹಳ್ಳಿಗಳ ರೈತರು ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆ ನಡೆಯನ್ನು ಖಂಡಿಸಿ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ 16 ಹಳ್ಳಿಯ ರೈತರು ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ADVERTISEMENT

ಸಾದಲಿ ಹೋಬಳಿಯ ಮೀಸಲು ಅರಣ್ಯ ವ್ಯಾಪ್ತಿಯ ಸುಮಾರು 16 ಹಳ್ಳಿಗಳ ರೈತರು ಕಂದಾಯ ಇಲಾಖೆಯ ದಾಖಲೆಗಳೊಂದಿಗೆ ಸುಮಾರು 50 ವರ್ಷದಿಂದ ಸಾಗುವಳಿ ಮಾಡುತ್ತಿದ್ದಾರೆ. ಇದೀಗ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು, ಈ ಜಮೀನು ಇಲಾಖೆಗೆ ಸೇರಿದೆ ಎಂದು ಬೇಲಿ ಅಳವಡಿಸುತ್ತಿದೆ. ರೈತರ ಗಮನಕ್ಕೆ ತರದೆ ಹಾಗೂ ಅವರಿಗೂ ನೋಟಿಸ್‌ ನೀಡದೆ ಸಿಮೆಂಟ್‌ ಪಿಲ್ಲರ್‌ ಮತ್ತು ಮುಳ್ಳು ತಂತಿ ಅಳವಡಿಸಲಾಗುತ್ತಿದೆ. ಬಲವಂತವಾಗಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಸ್ವಾಭಿಮಾನಿ ಸಮಾನ ಮನಸ್ಕರ ವೇದಿಕೆಯ ಸಂಘಟನಾ ಕಾರ್ಯದರ್ಶಿ ವಿಸ್ಡಂ ನಾಗರಾಜ್ ದೂರಿದರು.

ಕಂದಾಯ ಇಲಾಖೆಯ ದಾಖಲೆ ಅನ್ವಯ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ರಕ್ಷಣೆ ನೀಡಬೇಕು. ಭೂಮಿ ಉಳಿಸಿಕೊಡಲು ತಹಶೀಲ್ದಾರರು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ರೈತರು ಮನವಿ ಸಲ್ಲಿಸಿದರು.

ರೈತ ಮುಖಂಡರಾದ ಎಸ್.ಎಂ.ರವಿಪ್ರಕಾಶ್, ಗೋಪಾಲಪ್ಪ, ಆನಂದ್, ಶಂಕರಪ್ಪ, ಸದಾಶಿವ, ಮಂಜುನಾಥ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.