ಶಿಡ್ಲಘಟ್ಟ: ಯುವ ಮನಸ್ಸುಗಳ ಕಲರವ, ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಹೋಟೆಲ್, ಬೇಕರಿ ಸೇರಿದಂತೆ ಇತರೆಡೆಗಳಲ್ಲಿ ಜನ ಜಾತ್ರೆ. ಇದು ನಗರದಲ್ಲಿ ಹೊಸ ವರ್ಷಾಚರಣೆಯ ಸಮಯದಲ್ಲಿ ಕಂಡು ಬಂದ ದೃಶ್ಯಗಳು.
ಇಂದು 2021 ರ ವರ್ಷವನ್ನು ಬರ ಮಾಡಿಕೊಳ್ಳುವ ದಿನವಾಗಿದ್ದು, ಹಿಂದೂಗಳಿಗೆ ಯುಗಾದಿ ಹೊಸ ವರ್ಷವಾದರೂ ಸಹ ಕ್ಯಾಲೆಂಡರ್ನಂತೆ ಇಂದು ಹೊಸ ವರ್ಷವಾಗಿದೆ. ‘ಇದರ ಆಚರಣೆ ನಮ್ಮ ಸಂಸ್ಕೃತಿ ಅಲ್ಲದಿದ್ದರು ಸಹಾ, ಯುವ ಜನತೆ ಮತ್ತು ಮಕ್ಕಳ ಸಂತೋಷಕ್ಕೆ ಅಡ್ಡಿಯಾಗಬಾರದೆಂದು ಮತ್ತು ಕಳೆದ ವರ್ಷದ ನೋವು, ದುಗುಡವನ್ನು ಮರೆಯಲು ಹಿರಿಯರು ಸಹ ಆಚರಣೆಯಲ್ಲಿ ಭಾಗಿಯಾಗಿದ್ದಾರೆ’ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ನಗರದ ವಿವಿಧ ಅಂಗಡಿಗಳಲ್ಲಿ ಹೊಸ ವರ್ಷಾಚರಣೆಗೆ ಬೇಕಾದ ವಸ್ತುಗಳ ಮಾರಾಟದ ಭರಾಟೆ ಹೆಚ್ಚಾಗಿದೆ. ಬೇಕರಿ ಅಂಗಡಿಗಳಲ್ಲಿ ಕೇಕ್ ಖರೀದಿಗಾಗಿ ಜನತೆ ಮುಂದಾಗಿ ತಮ್ಮ ಶಕ್ತಾನುಸಾರವಾಗಿ ಅದಕ್ಕೆ ತಕ್ಕಂತೆ ತೂಕ ಮತ್ತು ಬಣ್ಣವನ್ನು ಆಯ್ಕೆ ಮಾಡುವುದರ ಮೂಲಕ ಖರೀದಿ ಮಾಡಿದ್ದಾರೆ.
ವರ್ಷಚಾರಣೆ ಹಿನ್ನೆಲೆಯಲ್ಲಿ ನಗರ ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಹೊಸ ವರ್ಷ ಶುಕ್ರವಾರ ಬಂದಿದ್ದರಿಂದ ಮತ್ತಷ್ಟು ಸಂತೋಷವನ್ನು ತಂದಿದೆ. ಇದರಿಂದ ಮುಂದಿನ ಎಲ್ಲಾ ದಿನಗಳ ಒಳ್ಳೆಯದಾಗಿರುತ್ತವೆ ಎನ್ನುವ ನಂಬಿಕೆ ಮನೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.