ADVERTISEMENT

ಅಭಿಮಾನ ಶೂನ್ಯರಿಂದ ಉಳಿವು ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 8:55 IST
Last Updated 3 ಫೆಬ್ರುವರಿ 2011, 8:55 IST

ಶೃಂಗೇರಿ:  ದೇಶದ ಸಂಸ್ಕೃತಿ ಅರಿಯದ ಅಭಿಮಾನ ಶೂನ್ಯ ರಾಜಕಾರಣಿಗಳಿಂದ ಸಂರಕ್ಷಣೆ ಸಾಧ್ಯವಿಲ್ಲ. ದೇಶದ ಅವಿಭಾಜ್ಯ ಅಂಗವಾದ ಕಾಶ್ಮೀರದಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಲಾಗದ ಸ್ಥಿತಿ ತಲುಪಿದ್ದೇವೆ. ಈ ದೇಶದ ವಿಭಜನೆಯ ಕಾಲ ಸನ್ನಿಹಿತವಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾಂತ ಕಾರ್ಯವಾಹ ಕ ಕಲ್ಲಡ್ಕ ಡಾ. ಪ್ರಭಾಕರಭಟ್ ತಿಳಿಸಿದರು. ಅವರು ಶೃಂಗೇರಿಯಲ್ಲಿ ಮಂಗಳವಾರ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು.

ಈ ದೇಶದಲ್ಲಿ ಮಾನವ ಸಂಪನ್ಮೂಲದ ಬಗ್ಗೆ ಅರಿವಿಲ್ಲದೆ ಜನಸಂಖ್ಯಾ ನಿಯಂತ್ರಣ ಎಂಬ ಭಾರತ ಸರ್ಕಾರದ ತಪ್ಪು ನೀತಿಯಿಂದ ಹಿಂದೂಗಳ ಜನಸಂಖ್ಯೆ ಕ್ಷಿಣಿಸುತ್ತಿದೆ. ಅಲ್ಪಸಂಖ್ಯಾತರು ಬಹುಸಂಖ್ಯಾತರಾಗುತ್ತಿದ್ದಾರೆ. ಅಲ್ಪಸಂಖ್ಯಾತರು ಬಹುಸಂಖ್ಯಾತರಾಗಿರುವ ಸ್ಥಳಗಳಲ್ಲಿ ಹಿಂಸೆ ತಾಂಡವಾಡುತ್ತಿದೆ ಎಂದರು.

ಶಾರದಾ ಪೀಠದ ಪ್ರತಿನಿಧಿ ಶ್ರೀಪಾದರಾವ್ ಮಾತನಾಡಿ, ಜಗತ್ತಿಗೆ ಮಾದರಿಯಾದ ಉನ್ನತ ಸಂಸ್ಕೃತಿ ನಮ್ಮದು. ಲಾಭ-ನಷ್ಟಗಳನ್ನು ಯೋಚಿಸದೇ ನಿಸ್ವಾರ್ಥ ಸೇವೆಯ ವ್ಯಕ್ತಿಗಳನ್ನು ನೀಡಿದ ಏಕೈಕ ಕಳಕಳಿಯ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹನುಮಾನ್ ಶಕ್ತಿ ಜಾಗರಣ ಸಮಿತಿ ಅಧ್ಯಕ್ಷ ಹೊರಣೇಬೈಲು ಶ್ರೀನಿವಾಸ್, ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂ ಭಯೋತ್ಪಾದನೆ ಎಂಬ ಸುಳ್ಳು ಸುದ್ಧಿ ಬಿಂಬಿಸಲಾಗುತ್ತಿದೆ. ಹಿಂದೂಗಳು ಭಯೋತ್ಪಾದಕರು ಆಗಿದ್ದರೆ ಈ ದೇಶದಲ್ಲಿ ಅನ್ಯ ಧರ್ಮಗಳು ಉಳಿಯುತ್ತಿರಲಿಲ್ಲ ಎಂದರು.
ಆದಿಚುಂಚನಗಿರಿ ಶಾಖಾಮಠದ ಮಹಾದ್ವಾರದಿಂದ ಆರಂಭಗೊಂಡ ಶೋಭಾಯಾತ್ರೆ ನಗರದಲ್ಲಿ ಸಂಚರಿಸಿತು. ಕಾಂಚೀನಗರದ ಓಂ ನಾಸಿಕ್ ಬ್ಯಾಂಡ್ ಮೇಳ ಕಿವಿಗಪ್ಪಳಿಸುವ ಪಟಾಕಿ ಶಬ್ಧ ಶೋಭಾಯಾತ್ರೆಯತ್ತ ಜನರನ್ನು ಆಕರ್ಷಿಸಿತು.

ಸಭಾ ಕಾರ್ಯಕ್ರಮ ಗಣೇಶ ಪ್ರಸಾದ್ ಅವರ ಪ್ರಾರ್ಥನೆ,  ಬಾಲಕಿ ಪಂಚಮಿಯ ವಂದೇ ಮಾತರಂನೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ವಿನೋದ್‌ಶೆಟ್ಟಿ, ದಿವೀರ್ ಮಲ್ನಾಡ್ ಸುಬ್ಬಣ್ಣ, ಆದಿತ್ಯ ಇದ್ದರು. ಬೆಳಿಗ್ಗೆ ಪಟ್ಟಣದ ಚಪ್ಪರದಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಹನುಮಾನ್ ಚಾಲೀಸ್ ಹವನ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.