ಕೊಪ್ಪ: ತಾಲ್ಲೂಕಿನ ಹಿರೇಕೊಡಿಗೆ ಗ್ರಾ.ಪಂ. ವ್ಯಾಪ್ತಿಯ ಕತ್ತಲಗಿರಿಯ ಪ್ರಗತಿಪರ ಸಾವಯವ ಕೃಷಿಕ ಮಂಜುನಾಥಮೂರ್ತಿ ಅವರ ಕೃಷಿ ಕ್ಷೇತ್ರದಲ್ಲಿ ಗುರುವಾರ ಕೃಷಿ ಇಲಾಖೆ ವತಿಯಿಂದ ಭೂಚೇತನ ಕಾರ್ಯಕ್ರಮದಡಿ ಭತ್ತದ ಕ್ಷೇತ್ರೋತ್ಸವ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುರುಷೋತ್ತಮ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮಂಜುನಾಥಮೂರ್ತಿ ಅವರ 1.5 ಎಕರೆ ತರಿ ಭೂಮಿಯಲ್ಲಿ ಯಾಂತ್ರೀಕೃತ ನಾಟಿ ಮಾಡಿರುವುದಲ್ಲದೆ ಸಕಾಲದಲ್ಲಿ ಲಘು ಪೋಷಕಾಂಶಗಳನ್ನು ಬೆಳೆಗೆ ಒದಗಿಸಿರುವುದರಿಂದ ಶೇ 20ರಷ್ಟು ಅಧಿಕ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದರು.
ಕೃಷಿಕ ಮಂಜುನಾಥ ಮೂರ್ತಿ ಮಾತನಾಡಿ, ಕೃಷಿ ಇಲಾಖೆ ಕ್ಷೇತ್ರಪಾಠಶಾಲೆ ಮೂಲಕ ಉಪಯುಕ್ತ ಮಾಹಿತಿ ನೀಡಿತು. ಕೃಷಿ ಅನುವುಗಾರ ರಾಜಾಶಂಕರ್ ಮಾರ್ಗದರ್ಶನದಲ್ಲಿ ಬೊರೆಕ್ಸ್, ಜಿಂಕ್ ಸಲ್ಫೇಟ್ ಪೋಷಕಾಂಶ ಒದಗಿಸಿದ್ದು, ಪಿ.ಇ.ಟಿ. ತಳಿ ಉತ್ತಮ ಇಳುವರಿ ನೀಡಿದೆ ಎಂದರು.
ಭತ್ತದ ಗದ್ದೆಯ ಕಾಲು ಗುಂಟೆ ಪ್ರದೇಶದ ಕೊಯ್ಲು ನಡೆಸಿ, ಭತ್ತ ಬೇರ್ಪಡಿಸಿ ತೂಕ ಮಾಡಲಾಯಿತು. ಎಕರೆಗೆ 23.10 ಕ್ವಿಂಟಲ್ ಭತ್ತ ಹಾಗೂ 51 ಕ್ವಿಂಟಲ್ ಹುಲ್ಲು ದೊರೆಯುವುದೆಂದು ಪ್ರಮಾಣೀಕರಿಸಲಾಯಿತು. ಕೃಷಿಕ ಲಕ್ಷ್ಮೀನಾರಾಯಣ್, ಅಧಿಕಾರಿ ರೂಪಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.