ADVERTISEMENT

`ಚಿಕ್ಕಮಗಳೂರು: 15 ಡೆಂಗೆ ಪ್ರಕರಣ'

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 6:06 IST
Last Updated 6 ಜುಲೈ 2013, 6:06 IST

ಚಿಕ್ಕಮಗಳೂರು: ತಾಲ್ಲೂಕಿನಲ್ಲಿ 15 ಡೆಂಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಲೋಕೇಶ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾ.ಪಂ. ಅಧ್ಯಕ್ಷ ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ವಿಷಯ ತಿಳಿಸಿ, ಚಿಕ್ಕಮಗಳೂರು ನಗರ ದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ ಎಂದು ಹೆಳಿದರು.

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ  ಚರಂಡಿಗಳ ಸ್ವಚ್ಛತೆಗೆ ಗಮನಹರಿಸುವಂತೆ ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಲ್ಲಿ ಮನವಿ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಈ ಕುರಿತು ತಾಲ್ಲೂಕು ಪಂಚಾಯಿತಿಯಿಂದ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದು ಸ್ವಚ್ಛತೆಗೆ ಗಮನ ಹರಿಸುವಂತೆ ತಿಳಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಅಂಗನವಾಡಿ ಕೇಂದ್ರ, ಶಾಲೆಯ ಮಧ್ಯಾಹ್ನದ ಬಿಸಿಯೂಟ ಕೊಠಡಿಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿದ್ದು, ನೀರಿನ್ನು ಸರಿಯಾದ ರೀತಿಯಲ್ಲಿ ಮುಚ್ಚಿಡಲು ಗಮನ ಹರಿಸುವುದು ಸೂಕ್ತ ಎಂದರು.

ನಗರದಲ್ಲಿ ಮುಸ್ಲಿಂ ಸಮುದಾಯದವರು ವಾಸಿಸುವ ಪ್ರದೇಶಗಳಲ್ಲಿ ಮೂರು ಅಂಗನವಾಡಿಕೇಂದ್ರಗಳನ್ನು ತೆರೆಯುವಂತೆ ಇಲಾಖೆಗೆ ಅರ್ಜಿಗಳು ಬಂದಿವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಭೆ ಗಮನ ಸೆಳೆದರು. ಧರ್ಮಪುರದ ಅಂಗನ ವಾಡಿಯಲ್ಲಿ ಕೇವಲ 3ಮಕ್ಕಳು ಇದ್ದಾರೆ ಎಂದು ಹೇಳಿದರು.

ನಗರದ ಬೇಲೂರು ರಸ್ತೆಯ ಸಮಾಜಕಲ್ಯಾಣ ಇಲಾಖೆಯಿಂದ 6 ಕೋಟಿ ರೂಪಾ ಯಿ ವೆಚ್ಚದಲ್ಲಿ ಸಾರ್ವಜನಿಕರ ಬಾಲಕರ ವಿದ್ಯಾರ್ಥಿನಿಲಯ ನಿರ್ಮಿಸಲಾಗುತ್ತಿದೆ. ಮೊದಲ ಹಂತವಾಗಿ 2ಕೋಟಿ ರೂಪಾಯಿ ಬಂದಿದ್ದು, ಕಟ್ಟಡ ನಿರ್ಮಿಸುವ ಕೆಲಸ ನಡೆಯುತ್ತಿದೆ ಎಂದು ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಧನಂಜಯ ತಿಳಿಸಿದರು.

ಕಳೆದ ಸಾಲಿನಲ್ಲಿ ರೇಷ್ಮೆ ಇಲಾಖೆಗೆ ಬಂದಿದ್ದ ಅನುದಾನ 42ಸಾವಿರ ರೂಪಾಯಿ ಹಿಂದಕ್ಕೆ ಹೋಗಿದೆ. ಈ ವರ್ಷ ಹಾಗಾಗದಂತೆ ಎಚ್ಚರವಹಿಸಬೇಕೆಂದು ಅಧಿಕಾರಿಗೆ ಸೂಚಿಸಿದ ಅಧ್ಯಕ್ಷರು, ಅಧಿಕಾರಿಗಳು ರೇಷ್ಮೆ ಬೆಳೆಯುವಂತೆ ರೈತರಿಗೆ ಮನವರಿಕೆ ಮಾಡಿಕೊಡುವುದು ಅಗತ್ಯ ಎಂದರು.

ಉಪಾಧ್ಯಕ್ಷ ಪುಟ್ಟೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಧರ್ಮಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಮೃತ್ಯುಂಜಯ ಹಾಜರಿದ್ದರು.

ಡೆಂಗೆಗೆ ಬಾಲಕಿ ಬಲಿ
ಸಮೀಪದ ಮಾಚೇನಹಳ್ಳಿಯ 5 ವರ್ಷದ ಬಾಲಕಿ ಮುಸ್ಕಾನ್ ಡೆಂಗೆ ಜ್ವರಕ್ಕೆ ಬಲಿಯಾಗಿದ್ದಾಳೆ.

ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಪೋಷಕರು ಅರಸೀಕೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಶುಕ್ರವಾರ ಸಾವನ್ನಪ್ಪಿದ್ದಾಳೆ.

ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯೆ ಗಾಯತ್ರಿಶಾಂತೇಗೌಡ, ಉಪವಿಭಾಗಾಧಿಕಾರಿ ಪ್ರಶಾಂತ್ ಮತ್ತು ತಹಸೀಲ್ದಾರ್ ಮೃತ ಬಾಲಕಿ ಮನೆಗೆ ಭೇಟಿ ನೀಡಿದರು.

ಗ್ರಾಮದ ಏಳೆಂಟು ಮಂದಿ ಜ್ವರದಿಂದ ಬಳಲುತ್ತಿದ್ದಾರೆ. ಕೂಡಲೇ ಸೂಕ್ತ ಚಿಕಿತ್ಸೆ ದೊರೆಯಬೇಕು. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಜನರು ಮುಂದಾಗಬೇಕೆಂದು ಗಾಯತ್ರಿಶಾಂತೇಗೌಡ ಮನವಿ ಮಾಡಿದರು. ಮೃತಪಟ್ಟಿರುವ ಬಾಲಕಿಯ ಕುಟುಂಬಕ್ಕೆ  ಕೂಡಲೇ  ಸರ್ಕಾರ ಪರಿಹಾರ ನೀಡಬೇಕೆಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.