ADVERTISEMENT

ಜೆಡಿಎಸ್ ವಿಕಾಸ ಪರ್ವ; ನಾಯಕರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 8:40 IST
Last Updated 21 ಮಾರ್ಚ್ 2018, 8:40 IST

ಚಿಕ್ಕಮಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ವಿಕಾಸ ಪರ್ವ ಪ್ರಚಾರ ಬಸ್ ಏರಿ ಮಂಗಳವಾರ ರೋಡ್ ಶೋ ನಡೆಸಿದರು.

ನಗರದ ರತ್ನಗಿರಿ ರಸ್ತೆಯಲ್ಲಿನ ಕಾಮಧೇನು ಗಣಪತಿ ದೇವಾಲಯದ ಆವರಣದಿಂದ ಮಧ್ಯಾಹ್ನ 12.45ಕ್ಕೆ ಜೆಡಿಎಸ್ ವಿಕಾಸ ಪರ್ವ ಮೆರವಣಿಗೆ ಆರಂಭವಾಯಿತು. ಬಸವನಹಳ್ಳಿ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ, ಆಜಾದ್ ಪಾರ್ಕ್ ವೃತ್ತದ ಮೂಲಕ ಮೆರವಣಿಗೆ 2.30ರ ವೇಳೆಗೆ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನ ತಲುಪಿತು.

ಮೆರವಣಿಗೆ ಹನುಮಂತಪ್ಪ ವೃತ್ತದ ಬಳಿಯ ಮಸೀದಿ ಎದುರು ಸಾಗುತ್ತಿದ್ದಂತೆ ಎಚ್.ಡಿ.ಕುಮಾರಸ್ವಾಮಿ ಅವರು ಮಸೀದಿಗೆ ಭೇಟಿ ನೀಡುವಂತೆ ಪಕ್ಷದ ಅಲ್ಪ ಸಂಖ್ಯಾತ ಕಾರ್ಯಕರ್ತರು ಪಟ್ಟು ಹಿಡಿದರು. ಭೇಟಿ ನೀಡದೆ ಮುಂದೆ ಹೋಗಬಾರದು ಎಂದು ಕೆಲ ಕಾರ್ಯಕರ್ತರು ವಿಕಾಸ ಪರ್ವದ ಬಸ್ಸನ್ನು ತಡೆಯಲು ಯತ್ನಿಸಿದರು.

ADVERTISEMENT

ಎಚ್.ಡಿ.ಕುಮಾರಸ್ವಾಮಿ ಜತೆಗಿದ್ದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಬಿ.ಎಚ್.ಹರೀಶ್ ಅವರು ಮಸೀದಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಸಂತೈಸಿದರು.

ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಪರ ಘೋಷಣೆ ಕೂಗುತ್ತಾ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.