ADVERTISEMENT

ತಾಲ್ಲೂಕು ಕಚೇರಿ ಮುಂದೆಯೇ ದುರ್ವಾಸನೆ

ಒಳ ಚರಂಡಿ ನಿರ್ಮಾಣಕ್ಕೆ ನಾಗರಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 7:01 IST
Last Updated 12 ಏಪ್ರಿಲ್ 2018, 7:01 IST
ತರೀಕೆರೆ ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಸೂಕ್ತ ಚರಂಡಿಗಳಿಲ್ಲದೇ ಕೊಳಚೆ ನೀರು ನಿಂತಿರುವುದು.
ತರೀಕೆರೆ ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಸೂಕ್ತ ಚರಂಡಿಗಳಿಲ್ಲದೇ ಕೊಳಚೆ ನೀರು ನಿಂತಿರುವುದು.   

ತರೀಕೆರೆ: ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಚೇರಿ ಹಾಗೂ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಒಳ ಚರಂಡಿ ಇಲ್ಲದೇ ಕೊಳಚೆ ನೀರು ನಿಂತಿದ್ದು, ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಆಡಳಿತ ಕೇಂದ್ರ ಕಚೇರಿಯೂ ಇಲ್ಲೇ ಇದ್ದು, ಈ ಜಾಗದ ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿ ತೆರಿಗೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ, ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಇಲಾಖೆಯ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.  ತ್ಯಾಗರಾಜನಗರ ಹಾಗೂ ಇತರೆ ಬೀದಿಗಳಿಂದ ಚರಂಡಿಗಳ ಮೂಲಕ ಹರಿಯುವ ಕೊಳಚೆ ನೀರು ಇಳಿಜಾರು ಪ್ರದೇಶವಾಗಿರುವುದರಿಂದ ಇಲ್ಲಿನ ಗುಂಡಿಗಳಿಗೆ ಬಂದು ಸೇರುತ್ತಿದೆ. ಕೊಳಚೆ ನೀರು ಹರಿದು ಹೋಗಲು ಒಳಚರಂಡಿ ಇಲ್ಲದೇ ಕೊಳಚೆ  ಶೇಖರಣೆಯಾಗಿ ಗಬ್ಬು ನಾರುತ್ತಿದೆ. ತಾಲ್ಲೂಕು ಆಡಳಿತದ ಮುಂದೆಯೇ ಈ ಸಮಸ್ಯೆ ಇದ್ದು, ಬೇರೆ ಕಡೆಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂದು  ಜನರು ಪ್ರಶ್ನಿಸುತ್ತಿದ್ದಾರೆ.

ಸರ್ಕಾರಿ ಕಚೇರಿಗಳು ಇರುವುದರಿಂದ ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಬಂದು ಹೋಗುತ್ತಾರೆ. ಸುತ್ತ ಮುತ್ತ ಜೆರಾಕ್ಸ್ ಅಂಗಡಿಗಳು, ಹೋಟೆಲ್‌ಗಳು, ಅರ್ಜಿ ಫಾರಂಗಳನ್ನು ಮಾರಾಟ ಮಾಡುವ ಮಳಿಗೆಗಳು ಸಹ ಇಲ್ಲಿವೆ. ಇಲ್ಲಿಗೆ ಬರುವ ಜನರು ಮೂಗು ಮುಚ್ಚಿಕೊಂಡು ಅಂಗಡಿಯವರ ಬಳಿ ವ್ಯವಹರಿಸುವ ದೃಶ್ಯ ಮಾಮೂಲಿಯಾಗಿದೆ.

ADVERTISEMENT

‘ಈ ಜಾಗವು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಕೆಲಸ ನಿರ್ವಹಿಸಲು ಪುರಸಭೆಗೆ ಅಧಿಕಾರವಿಲ್ಲದಂತಾಗಿದೆ ಎಂದು ಪುರಸಭೆ ಎಂಜಿನಿಯರ್ ಬಿಂದು ಅವರ ಅಭಿಪ್ರಾಯ. ತಾಲ್ಲೂಕು ಆಡಳಿತ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ ವಿಭಾಗಕ್ಕೆ ಒತ್ತಡ ತಂದು ತನ್ನ ಕಚೇರಿ ಮುಂದೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು’ ಎಂಬುದು ನಾಗರಿಕರ ಆಗ್ರಹ

ದಾದಾಪೀರ್, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.