ಚಿಕ್ಕಮಗಳೂರು: ಕರಗಡ ಏತ ನೀರಾವರಿ ವ್ಯಾಪ್ತಿಯ ದೇವಿಕೆರೆ ಗೇಟ್ ವಾಲ್ವ್ ಎತ್ತಿ ನಾಲೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಮಂದಗತಿಯಲ್ಲಿ ಹರಿಯುತ್ತಿದೆ. ನಾಲೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಈಶ್ವರಹಳ್ಳಿ, ಕಳಸಾಪುರದ ಕೆಲವರು ಹೂಳು ಎತ್ತುವ ಕಾಯಕದಲ್ಲಿ ತೊಡಗಿದ್ದಾರೆ.
ಇದೇ 15ರಂದು ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ದೇವಿಕೆರೆ ಗೇಟ್ ವಾಲ್ವ್ ತೆರೆದು ಪ್ರಾಯೋಗಿಕವಾಗಿ ನಾಲೆಗೆ ನೀರು ಹರಿಸಲಾಗಿತ್ತು. ಹೂಳು, ವಾಟ ಸಮಸ್ಯೆ, ಅವೈಜ್ಞಾನಿಕ ಕಾಮ ಗಾರಿಯಿಂದಾಗಿ ನಾಲೆಯಲ್ಲಿ ನೀರು ಹರಿಯುತ್ತಿಲ್ಲ ಎಂದು ಕೆಲವರು ದೂಷಿಸಿದ್ದರು.
ಈಶ್ವರಹಳ್ಳಿಯ ಕೆಲ ರೈತರು ಅ. 20ರಿಂದ ದೇವಿಕೆರೆಯ ಗೇಟ್ ವಾಲ್ವ್ ಬಳಿಯಿಂದ ನಾಲೆಯ ಹೂಳು ಎತ್ತುವ ಕಾಯಕದಲ್ಲಿ ತೊಡಗಿದ್ದಾರೆ. ಹೂಳು, ಹುಲ್ಲು, ಕಸಕಡ್ಡಿ ತೆಗೆದು ನೀರು ಹರಿಯಲು ಅನುವು ಮಾಡುತ್ತಿದ್ದಾರೆ.
ಶ್ರಮದಾನದಲ್ಲಿ ತೊಡಗಿದ್ದ ಈಶ್ವರಹಳ್ಳಿ ಗ್ರಾಮಸ್ಥರೂ ಆಗಿರುವ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಈ.ಆರ್.ಮಹೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಹೂಳು ಎತ್ತಿಸುವುದಕ್ಕೆ ಗುತ್ತಿಗೆದಾರರನ್ನು ಕಾಯುವುದು ವ್ಯರ್ಥ ಎಂದು ರೈತರೇ ಒಗ್ಗೂಡಿ ಶ್ರಮದಾನಲ್ಲಿ ತೊಡಗಿದ್ದೇವೆ. ಎರಡು ದಿನಗಳಿಂದ ಈ ಕಾಯಕ ಮಾಡುತ್ತಿದ್ದೇವೆ.
ಹೂಳು ಎತ್ತುತ್ತಿದ್ದೇವೆ. ಈಗ ನೀರು ಹರಿ ಯುತ್ತಿದೆ. ಈಶ್ವರಹಳ್ಳಿಯ ಪಂಚಾಯಿತಿ 40 ಗ್ರಾಮಸ್ಥರು ಈ ಭಾಗದಲ್ಲಿ, ಕಳಸಾಪುರ ಪಂಚಾಯಿತಿಯ ಸುಮಾರು 30 ಗ್ರಾಮ ಸ್ಥರು ಮತ್ತೊಂದು ಭಾಗದಲ್ಲಿ ಶ್ರಮದಾನ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
‘ಇಲ್ಲಿಂದ ಕಳಾಸಪುರ ಕೆರೆಗೆ ನಾಲ್ಕೂವರೆ ಕಿಲೊ ಮೀಟರ್ ಅಂತರ ಇದೆ. ಕೆಲವೆಡೆ ಮಣ್ಣು ಕುಸಿದು ನಾಲೆಯಲ್ಲಿ ಹೂಳು ತುಂಬಿಕೊಂಡಿದೆ. ನಾಲೆಯುದ್ದಕ್ಕೂ ನೀರು ಹರಿಯುವುದಕ್ಕೆ ಇರುವ ಅಡೆತಡೆಗಳನ್ನು ತೆರವು ಮಾಡುತ್ತೇವೆ. ಕಳಾಸಪುರ ಕೆರೆಗೆ ನೀರು ತಲುಪಿದೆ. ನೀರು ಸರಿಯಾಗಿ ಹರಿಯದಿದ್ದರೆ ಯಂತ್ರದಿಂದ ನೀರು ಎತ್ತಿ ಕಾಲುವೆಗೆ ಹರಿಸಿ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ’ ಎಂದರು.
ಹಾಸನ ಜಿಲ್ಲೆಯ ಜಾವಗಲ್ ಹೋಬ ಳಿಯ ಎಸ್.ಕಲ್ಲಳ್ಳಿಯ ಕೆಲ ಯುವಕರು ನಾಲೆಯೊಳಗಿನ ಕಲ್ಲುಗಳನ್ನು ಬದಿಗೆ ಹಾಕುವ ಕಾಯಕದಲ್ಲಿ ತೊಡಗಿದ್ದರು. ದೇವಿಕೆರೆಯ ಒಂದು ಕಡೆಯ ಕೋಡಿ ಬಿದ್ದ ನೀರು ಯಗಚಿ ಜಲಾಶಯಕ್ಕೆ ಹರಿಯುತ್ತದೆ. ದೇವಿಕೆರೆ ಭರ್ತಿಯಾದ ನಂತರ ನೀರು ಕರಗಡ ನಾಲೆಗೆ ಹರಿಯುತ್ತದೆ. ನಾಲೆ ವಾಟ (ಇಳಿಜಾರು) ಸಮಸ್ಯೆ ಇದೆ. ಸ್ವಲ್ಪ ಆಳ ತೋಡಿ, ವಾಟ ಮಾಡಬೇಕು’ ಎಂದು ಕರಗಡ ಗ್ರಾಮದ ರಾಮಯ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.