ADVERTISEMENT

ಬರಕ್ಕೆ ಸ್ಪಂದಿಸಿ; ಜಿ.ಪಂ. ಅಧ್ಯಕ್ಷೆ ಸೂಚನೆ

ಕಡೂರು ತಾ.ಪಂ. ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 9:20 IST
Last Updated 13 ಡಿಸೆಂಬರ್ 2012, 9:20 IST

ಕಡೂರು: ಬರಗಾಲದಿಂದ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿ ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು. 

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧ ವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲಿಸಿ ಅವರು ಮಾತ ನಾಡಿದರು.

ಬರಗಾಲದಿಂದ ಅನೇಕ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಮೆಸ್ಕಾಂ ಅಧಿಕಾರಿ ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಸಮಸ್ಯೆ ಗಳಿಗೆ ಸ್ಪಂದಿಸಿ ಸಹಕರಿಸಬೇಕೆಂದು ಸಲಹೆ ನೀಡಿದರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಬರುವ ಯಾವುದೇ ಕಡತಗಳನ್ನು ಕೂಡಲೇ ಪರಿಶೀಲಿಸಿ ಕಳುಹಿಸಿ ಕೊಡಲಾಗುತ್ತಿದೆ ಎಂದು ಮೆಸ್ಕಾಂ ಮುಖ್ಯ ಎಂಜಿನಿಯರ್ ಕರಿಸಿದ್ದಯ್ಯ ಸಭೆಗೆ ಮಾಹಿತಿ ನೀಡಿದರು. 

ತಾಲ್ಲೂಕಿನಲ್ಲಿ 11,077 ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ವೇಳೆ ಅಂತರ್ಜ ಲದಿಂದ ನೀರಿನ ಸಾಮರ್ಥ್ಯ ಕಡಿಮೆಯಾದಲ್ಲಿ ಕೂಡಲೇ ಅಂತಹ ಸ್ಥಳದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿ ನೀರು ನೀಡಬೇಕೆಂದು ಜಿ.ಪಂ.ಎಂಜಿ ನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ಜೋಡಿತಿಮ್ಮಾಪುರ, ಎಸ್. ಮಾದಾಪುರ, ರಂಗೇನಹಳ್ಳಿ, ಕಲ್ಲೆನಿಂಗಹಳ್ಳಿ, ರಂಗಾಪುರ, ತೆರಸಾಪುರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂದು ಎಂಜಿನಿಯರ್ ಜಿ.ಪಂ. ಸಿಇಒ ಶಿವಶಂಕರ್ ಪ್ರಶ್ನಿಸಿದರು.

ಸಮಸ್ಯೆ ವಿವರ ನೀಡಲು ಎಂಜಿನಿಯರ್ ಮುದ್ದುಕೃಷ್ಣ ಮತ್ತು ಪ್ರಭಾಕರ್ ರಾವ್ ಅವರಲ್ಲಿ ಗೊಂದಲ ಮೂಡಿದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ರೇಖಾ ಹುಲಿಯಪ್ಪ ಗೌಡ, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಸಮ ರ್ಪಕವಾಗಿ ಪರಿಶೀಲಿಸಿ ಬಗೆಹರಿಸಲು ಸೂಚಿಸಿದರು.

ಬೀರೂರು ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆ ಗೇರಿಸಬೇಕು, ಗ್ಯಾಸ್ ಸಿಲಿಂಡರ್ ಕೊರತೆ, ನೀರಿನ ಸಮಸ್ಯೆಯ ಬಗ್ಗೆ ಡಾ.ವಾಸುದೇವಮೂರ್ತಿ ಸಭೆಯ ಗಮನ ಸೇಳೆದರು. ಸಿಒ ಶಿವಶಂಕರ್, ಜಿಲ್ಲಾ ವೈದ್ಯಾಧಿಕಾರಿ ಡಾ.ನೀರಜ್‌ಸಲಹೆ ನೀಡಿ, ಬೀರೂರು ಆಸ್ಪತ್ರೆಯ ಸಮಸ್ಯೆಯ ಬಗ್ಗೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಕೃಷಿ ಇಲಾಖೆಯಲ್ಲಿ ಸುವರ್ಣ ಭೂಮಿ ಯೋಜನೆ ಯಡಿ ಅರ್ಜಿಸಲ್ಲಿಸಿರುವ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ನೀಡುವುದಾಗಿ ಅಧಿಕಾರಿ ಶಿವಣ್ಣ ಮಾಹಿತಿ ನೀಡಿದರು.

ಸಮಾಜ ಕಲ್ಯಾಣ, ಬಿಸಿಎಂ, ಶಿಕ್ಷಣ, ಮೀನುಗಾರಿಕೆ, ರೇಷ್ಮೆ, ಪಶುವೈದ್ಯ, ಜಲಾನಯನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗ, ಪುರಸಭೆ, ಆರೋಗ್ಯ ಹಾಗೂ ಇನ್ನಿತರೆ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.