ADVERTISEMENT

ಬೀದಿ ಪಾಲಾದ ಬೆಂಗಳೂರು ಯುವತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:24 IST
Last Updated 16 ಸೆಪ್ಟೆಂಬರ್ 2013, 9:24 IST

ಬಾಳೆಹೊನ್ನೂರು: ಯುವಕನನ್ನು ನಂಬಿ ಪಟ್ಟಣಕ್ಕೆ ಬಂದ ಬೆಂಗಳೂರಿನ ಯುವತಿ ಬೀದಿ ಪಾಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸಂಜೆ ವೇಳೆ ಒಬ್ಬ ಯುವತಿ ಕುಳಿತಿದ್ದನ್ನು ಕಂಡ ಸ್ಥಳೀಯರು ಠಾಣೆಗೆ ಸುದ್ದಿ ಮುಟ್ಟಿಸಿ­ದ್ದರು. ಪೊಲೀಸರು ಸ್ಥಳಕ್ಕೆ ಬಂದು ಯುವತಿಯನ್ನು ವಿಚಾರಿಸಿದಾಗ ಆಕೆ ಮೋಸ ಹೋದ ಘಟನೆ ತಿಳಿದು ಬಂದಿದೆ.

ಬಾಳೆಹೊನ್ನೂರು ಸಮೀಪದ ಯುವಕ­ನೊಬ್ಬ ಆಕೆಯನ್ನು ಕರೆತಂದು ಆಕೆಗೆ ಇಡೀ ದಿನ ಊಟ ತಿಂಡಿ ಕೊಡಿಸಿ, ಸಂಜೆ ವೇಳೆ ಮದ್ಯಪಾನ ಮಾಡಿಸಿದ್ದಾನೆ. ಯುವತಿಗೆ ಮತ್ತೇರಿದ ನಂತರ ಆಕೆಯನ್ನು ರಾತ್ರಿ 7 ಗಂಟೆ ಸುಮಾರಿಗೆ ಬಸ್‌ ನಿಲ್ದಾಣಕ್ಕೆ ಕರೆತಂದು ಆಕೆಯೊಂದಿಗೆ ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿದ್ದಾನೆ. ನಂತರ ಹಣ್ಣು, ನೀರು ತರುವುದಾಗಿ ತಿಳಿಸಿ ಹೊರಟುಹೋದ ಆತ ಮತ್ತೆ ನಿಲ್ದಾಣದ ಕಡೆ ಸುಳಿಯಲಿಲ್ಲ.

ಆಧುನಿಕ ಧಿರಿಸು ತೊಟ್ಟು ಕುಡಿದ ಮತ್ತಿನಲ್ಲಿದ್ದ ಸುಮಾರು 21ರ ಪ್ರಾಯದ ಯುವತಿ ಬೆಂಗಳೂರಿಗೆ ತೆರ­ಳಲು ಅಣಿಯಾದರೂ ಕೈಯಲ್ಲಿ ಬಿಡಿ­ಕಾಸು ಇರಲಿಲ್ಲ. ಕರೆ ತಂದವರಾರು, ಆತನ ಹೆಸರು, ಮನೆಯ ವಿಳಾಸ­ವನ್ನೂ ಹೇಳುವ ಸ್ಥಿತಿಯಲ್ಲಿ ಆಕೆ ಇರದಿ­ದ್ದನ್ನು ಕಂಡ ಪೊಲೀಸರು  ಅರೆಕ್ಷಣ ದಂಗಾದರು.

ಪಟ್ಟಣದಿಂದ ಸುಮಾರು 5ರಿಂದ 6 ಕೀಮಿ ದೂರದ ಮನೆಗೆ ಯುವಕ ತನ್ನನ್ನು ಕರೆದೊಯ್ದಿದ್ದ ಎನ್ನುವು­ದಷ್ಟೇ ಆಕೆಯ ಹೇಳಿಕೆ­ಯಾಗಿತ್ತು. ಆಕೆಯನ್ನು ಕರೆತಂದ ಯುವಕ ಯಾರು ಎನ್ನುವುದು ಕೊನೆಗೂ ಕಗ್ಗಂಟಾಗಿಯೇ ಉಳಿ­ಯಿತು. ಕೊನೆಗೆ ಸ್ಥಳೀಯ ವರ್ತಕರು, ಆಟೊ ಚಾಲಕರ ಮನವೊಲಿಸಿದ ಪೊಲೀಸರು ಆಕೆಯ ಬಸ್‌ಚಾರ್ಜ್‌ಗೆ ಹಣವನ್ನು ಒಟ್ಟುಗೂಡಿಸಿ ಕೊಟ್ಟು ಬೆಂಗಳೂರಿಗೆ ವಾಪಸ್‌ ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.