ತರೀಕೆರೆ: ಮಳೆಯಿಂದ ಉಂಟಾ ಗಿರುವ ವಾಸ್ತವಿಕ ನಷ್ಟದ ವಿವರವನ್ನು ನೀಡು ವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ದೇವರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಷ್ಟದ ಪ್ರಮಾಣವನ್ನು ಅಧಿಕಾ ರಿಗಳು ಅವೈಜ್ಞಾನಿಕವಾಗಿ ನೀಡುತ್ತಿದ್ದು, ಇದರಿಂದ ಪರಿಹಾರ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಪಡೆಯಲು ತೊಂದರೆ ಆಗಲಿದೆ. ಹಾಗಾಗಿ ನಷ್ಟ ಉಂಟಾಗಿರುವ ಸ್ಥಳಕ್ಕೆ ಭೇಟಿ ನೀಡಿ , ವಾಸ್ತವಿಕತೆಗೆ ಹತ್ತಿರ ಇರುವಂತಹ ವರದಿ ನೀಡಲು ಅಧಿಕಾರಿಗಳು ಮುಂದಾಗುವಂತೆ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತ ಮಾತನಾಡಿ, ಅಂಗವಾಡಿ ಕೇಂದ್ರ ಗಳೆಲ್ಲವೂ ಸಹಾ ಕಳಪೆ ಕಾಮಗಾ ರಿಯಿಂದಾಗಿ ಸೋರುತ್ತಿದ್ದು, ಈ ಬಗ್ಗೆ ಸಿಡಿಪಿಒ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಅವಲೋಕಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗುವಂತೆ ಸೂಚಿಸಿದರು. ಹಾಸ್ಟೆಲ್ಗಳಲ್ಲಿ ಸ್ವಚ್ಛತೆ ಕುರಿತು ಗಮನ ಹರಿಸಲು ಬಿಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ, ಇಲ್ಲಿಯ ವರೆಗೆ ಬಂದಿರುವ ಮಳೆಯಿಂದ ಯಾವುದೇ ಬೆಳೆಗಳಿಗೆ ಹಾನಿ ಸಂಭ ವಿಸಿಲ್ಲ. ಆದರೆ ಇದೇ ರೀತಿಯ ಮಳೆ ಮುಂದುವರಿದರೆ ಮಾತ್ರ ಬೆಳೆ ನಷ್ಟ ಉಂಟಾಗಲಿದೆ ಎಂದರು. ಕೃಷಿ ಇಲಾಖೆ ನಿಗದಿಪಡಿಸಿದ ವಿವಿಧ ಬೆಳೆಗಳ ಗುರಿ ಮುಟ್ಟಲಾಗಿದೆ. ರೈತರಿಗೆ ಅಗತ್ಯ ಇರುವ ಎಲ್ಲಾ ರೀತಿಯ ಸಹಕಾರ ಇಲಾಖೆ ವತಿಯಿಂದ ನೀಡಲಾಗುತ್ತಿದೆ ಎಂದರು.
ತೋಟಗಾರಿಕೆ ಇಲಾಖೆ ಮುಖ್ಯಸ್ಥರು ಸಭೆಗೆ ಮಾಹಿತಿ ನೀಡಿ, ಮಳೆಯಿಂದ ತೀವ್ರ ಹಾನಿಯಾಗಿರುವ ಶಿವನಿ, ಅಜ್ಜಂಪುರ ಭಾಗಗಳಲ್ಲಿ ಆಲೂಗೆಡ್ಡೆ ಬೆಳೆ ಭಾಗಶಃ ಹಾಳಾಗಿದ್ದು, ಈರುಳ್ಳಿ ಮತ್ತು ತೋಟಗಾರಿಕೆ ಬೆಳೆಗಳು ಉತ್ತಮ ವಾಗಿವೆ. ಮಳೆ ಬಿಡುವು ನೀಡಿದಲ್ಲಿ ಈ ಬಾರಿ ಉತ್ತಮ ತೋಟಗಾರಿಕೆ ಫಸಲು ಸಾಧ್ಯವಾಗಲಿದೆ ಎಂದರು.
ರೈತರಿಗೆ ಈಗಾಗಲೇ ತೆಂಗಿನ ಸಸಿಗಳನ್ನು ವಿತರಿಲಾಗಿದ್ದು, ರಿಯಾಯಿತ ದರದಲ್ಲಿ ಈಗಲೂ ನೀಡಲಾಗುವುದು ಎಂದರು. ಸಪೋಟ ಮತ್ತು ಮಾವು, ಗುಲಾಬಿ ಮತ್ತು ಬೆಳೆಗಾರರಿಗೆ ಧನ ಸಹಾಯ ನೀಡಲಾಗುತ್ತಿದೆ ಎಂದರು. ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷೆ ಗೌರಮ್ಮ , ಯೋಜನಾಧಿಕಾರಿ ರಾಜ ಗೋಪಾಲ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.