ADVERTISEMENT

ಮಾಣಿಮಕ್ಕಿ: ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 5:50 IST
Last Updated 16 ಫೆಬ್ರುವರಿ 2012, 5:50 IST

ಚಿಕ್ಕಮಗಳೂರು: ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಜನರು ಸದುಪಯೋಗಪಡಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕೆಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ತಿಳಿಸಿದರು.

 ಕೆಳಗೂರು ಗ್ರಾ.ಪಂ. ವ್ಯಾಪ್ತಿಯ ಮಾಣಿಮಕ್ಕಿ ಗ್ರಾಮದಲ್ಲಿ ಸಾರ್ವಜನಿಕ ಸಮುದಾಯ ಭವನದ ಅಡುಗೆ ಕೋಣೆ ಮತ್ತು ಊಟದ ಸಭಾಂಗಣಕ್ಕೆ ಇತ್ತೀಚೆಗೆ  ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

 ಕೆಳಗೂರು  ಗ್ರಾ.ಪಂ.ಗೆ 2 ಕೋಟಿಗೂ ಅಧಿಕ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ನೀಡಲಾಗಿದೆ. ರೂ. 50 ಲಕ್ಷ  ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಪಿ.ಎಂ.ಜಿ.ಎಸ್.ವೈ. ಯೋಜನೆಯಲ್ಲಿ ಬಾಳೇಹಳ್ಳಿಯಿಂದ ಈಶ್ವರಹಳ್ಳಿ ರಸ್ತೆ ಡಾಂಬರೀಕರಣಕ್ಕೆ  ರೂ. 30 ಲಕ್ಷ ನೀಡಲಾಗುವುದು ಎಂದರು.

 ಈಗಾಗಲೇ ವಸತಿ ಸಚಿವರ ಬಳಿ ಹೆಚ್ಚಿನ ಆಶ್ರಯ ಮನೆ ಮಂಜೂರು ಮಾಡುವಂತೆ ಕೋರಿ ಮನವಿ ಮಾಡಲಾಗಿದೆ. ಶ್ರಿಘ್ರದಲ್ಲಿಯೇ ಬಸವ ಇಂದಿರಾ ಆವಾಸ್ ಯೋಜನೆಯಲ್ಲಿ ಮನೆ ಮಂಜೂರು ಮಾಡುವುದಾಗಿ ಸಚಿವರ ಭರವಸೆ ನೀಡಿದ್ದಾರೆ. ಜತೆಗೆ ಅರ್ಜಿ ನೀಡಿರುವ ಅರ್ಹರಿಗೆ ಹಕ್ಕುಪತ್ರವನ್ನು ವಿತರಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಸವಿತಾ ರಮೇಶ್ ಮಾತನಾಡಿ, ಜಿಲ್ಲಾ ಪಂಚಾಯಿತಿಯಲ್ಲಿ ಸದಸ್ಯರ ಅನುದಾನವನ್ನು ಕಡಿಮೆ ಮಾಡಿ ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಇದರಿಂದ ಸದಸ್ಯರಿಗೆ ಅತ್ಯಂತ ನೋವುಂಟಾಗಿದೆ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವಯ್ಯ ಮಾತನಾಡಿ, ಗ್ರಾಮಕ್ಕೆ ಅಗತ್ಯವಿರುವ ಕುಡಿಯುವ ನೀರು, ರಸ್ತೆ, ಶಾಲಾ ಕಾಂಪೌಂಡ್, ಸರ್ಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಾಸಕರು ಗಮನ ಹರಿಸಬೇಕೆಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಗಂಗಯ್ಯ, ಎಪಿಎಂಸಿ ಸದಸ್ಯ ನಾರಾಯಣಾಚಾರಿ, ಸದಸ್ಯರಾದ ಸುಜಾತ, ಆಸಿಫ್, ಬಿಲ್ಲೇಶ್, ಶ್ರೀರಂಗ, ಕಾಂಗ್ರೆಸ್ ಮುಖಂಡ ವಸಂತ ಕುಮಾರ್, ಬಿಜೆಪಿ ಮುಖಂಡ ಉಮೇಶ್, ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.