ADVERTISEMENT

ಮೂಡಿಗೆರೆ: ನಿವೇಶನ ರಹಿತರ ಜಾಥಾ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 8:20 IST
Last Updated 24 ಸೆಪ್ಟೆಂಬರ್ 2011, 8:20 IST

ಬಿಳಗುಳ(ಮೂಡಿಗೆರೆ ): ತಾಲ್ಲೂಕಿನ ನಿವೇಶನ ರಹಿತರನ್ನು ಸಂಘಟಿಸಲು ಬಿಳಗುಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ `ಸೂರಿಗಾಗಿ ಸಮರ~ ಜನಾಂದೋಲನ ಜಾಥಾ ವನ್ನು  ಎಐವೈಎಫ್ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಸಾತಿ ಸುಂದರೇಶ್ ಉದ್ಘಾಟಿಸಿದರು.

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ನಿವೇಶನ ರಹಿತರಿಗೆ ಒಂದೇ ಒಂದು ನಿವೇಶನವನ್ನು ಸರ್ಕಾರ, ಗ್ರಾ.ಪಂ.ಗಳು ನೀಡಿಲ್ಲ ಈ ನಿಟ್ಟಿನಲ್ಲಿ  ಜಾಥಾ ನಡೆಸಿ ನಿವೇಶನ ರಹಿತರನ್ನು ಸಂಘಟಿಸಲಾಗುವುದು ಎಂದರು.

ತಾಲ್ಲೂಕಿನಲ್ಲಿ ವಾಸಿಸುವ ಜನರಿಗೆ ಸೂರು ನಿರ್ಮಿಸುವ ಕನಸು ನನಸು ಮಾಡಲು   ಜನಪ್ರತಿನಿಧಿಗಳನ್ನು, ಅಧಿಕಾರಿ ಗಳನ್ನು ಎಚ್ಚರಿಸಲಾಗುತ್ತದೆ ಎಂದರು.

ರಾಜ್ಯ ಸರ್ಕಾರ ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ನಿವೇಶನ ಹಾಗೂ ಸೂರು ನಿರ್ಮಿಸಲು ಜಿಲ್ಲೆಗೆ ರೂ 3.15ಕೋಟಿ ಹಣ ಮಂಜೂರು ಮಾಡಿದ್ದರೂ ಯಾವುದೆ ಗ್ರಾ.ಪ.,ಜಿ.ಪಂ., ತಾ.ಪಂ. ಹಾಗೂ ಶಾಸಕರು ಖಾಸಗಿ ಭೂಮಿ ಖರೀದಿಸಿ ನಿವೇಶನ ನೀಡಲು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.

ತಾಲ್ಲೂಕು ಎಐವೈಎಫ್ ಕಾರ್ಯದರ್ಶಿ ಪೆರಿಯಾಸ್ವಾಮಿ ಮಾತನಾಡಿ, ಸೂರಿಗಾಗಿ ಸಮರ ಜಾಥ ತಾಲ್ಲೂಕಿನ ಎಲ್ಲ ಗ್ರಾಮ ಹಾಗೂ ಕಾಲೊನಿಗಳಲ್ಲಿ ಸಂಚರಿಸಿ ಜನರಲ್ಲಿ ವಾಸ್ತವ ಸಂಗತಿಯನ್ನು ತಿಳಿಸಿ ಜನರನ್ನು ಸಂಘಟಿಸಲಾಗುವುದು ಎಂದರು.

ತಾಲ್ಲೂಕು ಅಧ್ಯಕ್ಷ ಸುಂಕಸಾಲೆ ರವಿ ಮಾತನಾಡಿ,  ಇದೇ 23ರಿಂದ 26ರವರಗೆ ಜನಾಂದೋಲನ ಜಾಥಾ ನಡೆಸಿ 30ರಂದು ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ನಿವೇಶನ ರಹಿತರ ಸಮಾವೇಶ ನಡೆಸಲಾಗುವುದು ಎಂದರು.

 ರಾಜ್ಯ ಕಾರ್ಯದರ್ಶಿ ಎ.ಎಸ್.ಮೋನಪ್ಪ, ತಾಲ್ಲೂಕು ಸಮಿತಿ ಉಪಾಧ್ಯಕ್ಷ ಅಣ್ಣಪ್ಪ, ಸುಂದರ್, ಸುರೇಂದ್ರ, ಬಿಳಗುಳ ಶಾಖೆ ಸುಬ್ರಹ್ಮಣ್ಯ ಎಐವೈಎಫ್ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.