ಚಿಕ್ಕಮಗಳೂರು: ‘ತರೀಕೆರೆಯಲ್ಲಿ ಬುಧವಾರ ಬೆಳಿಗ್ಗೆ ರಸ್ತೆ ತಡೆ ನಡೆಸುತ್ತಿದ್ದ ಪ್ರತಿಭಟನಾನಿರತನ್ನು ಬದಿಗೆ ಸರಿಸಿ, ದ್ವಿತೀಯ ಪಿಯು ಪರೀಕ್ಷಾರ್ಥಿಗಳಿಗೆ ಕೇಂದ್ರಕ್ಕೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದೇವೆ. ರೈತರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
‘ರಸ್ತೆ ತಡೆ, ಪ್ರತಿಭಟನೆಯಿಂದಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ತೊಂದರೆಯಾಗಿದೆ ಎಂದು ಕೆಲವರು ದೂರವಾಣಿ ಮೂಲಕ ನನಗೆ ತಿಳಿಸಿದರು. ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಿ, ಸ್ಥಳಕ್ಕೆ ತೆರಳಿದೆ. ಅಲ್ಲಿ ಪ್ರತಿಭಟನಾನಿರತನ್ನು ಬದಿಗೆ ಸರಿಸಿ ವಿದ್ಯಾರ್ಥಿಗಳಿಗೆ ಕೇಂದ್ರಗಳಿಗೆ ಹೋಗಲು ಅನುಕೂಲ ಮಾಡಿಕೊಟ್ಟೆವು. ರೈತರ ಬಗ್ಗೆ ಗೌರವ ಇದೆ’ ಎಂದು ತಿಳಿಸಿದ್ದಾರೆ.
‘ಕೆಲ ವಿದ್ಯಾರ್ಥಿಗಳು ಸುಮಾರು 20 ನಿಮಿಷ ತಡವಾಗಿ ಕೇಂದ್ರಗಳನ್ನು ತಲುಪಿದ್ದಾರೆ. ಮಾಜಿ ಶಾಸಕರ ಕೊರಳಪಟ್ಟಿಗೆ ಕೈ ಹಾಕಬೇಕು ಎಂಬ ಉದ್ದೇಶ ನಮಗೆ ಇರಲಿಲ್ಲ. ಪ್ರತಿಭಟನಾನಿರತರನ್ನು ಬದಿಗೆ ದಬ್ಬಿ ಸಂಚಾರಕ್ಕೆ ವ್ಯವಸ್ಥೆ ಮಾಡಿದೆವು’ ಎಂದರು.
‘ಸ್ಥಳೀಯ ಪೊಲೀಸರು ರೈತರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ಪಷ್ಪನೆ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.