ADVERTISEMENT

ಶ್ರಮದಾನದಿಂದ ಪ್ರಧಾನಿ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 9:19 IST
Last Updated 18 ಸೆಪ್ಟೆಂಬರ್ 2017, 9:19 IST
ಪ್ರಧಾನಿ ನರೇಂದ್ರಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಮೂಡಿಗೆರೆ ತಾಲ್ಲೂಕು ಬಿಜೆಪಿ ಘಟಕದಿಂದ ಭಾನುವಾರ ಎಂಜಿಎಂ ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ಪ್ರಧಾನಿ ನರೇಂದ್ರಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಮೂಡಿಗೆರೆ ತಾಲ್ಲೂಕು ಬಿಜೆಪಿ ಘಟಕದಿಂದ ಭಾನುವಾರ ಎಂಜಿಎಂ ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಲಾಯಿತು.   

ಮೂಡಿಗೆರೆ: ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಗತಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟರೆ ಇಡೀ ದೇಶವನ್ನೇ ಒಂದು ಹೆಜ್ಜೆ ಮುಂದೆ ಸಾಗಿಸಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌ ಅಭಿಪ್ರಾಯಪಟ್ಟರು.

ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಪ್ರಧಾನಿ ನರೇಂದ್ರಮೋದಿ ಅವರ ಜನ್ಮದಿನ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಶ್ರಮದಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂಬುದು ಪ್ರಧಾನಿ ನರೇಂದ್ರಮೋದಿ ಅವರ ಕನಸಾಗಿದ್ದು, ಇದಕ್ಕೆ ದೇಶದ ಪ್ರತಿಯೊಬ್ಬ ಪ್ರಜೆಯೂ ಕೊಡುಗೆ ನೀಡಬೇಕಾಗುತ್ತದೆ. ಇಡೀ ವಿಶ್ವದಲ್ಲಿ ಭಾರತವು ತನ್ನ ಸ್ಥಾನ ಮಾನವನ್ನು ಪ್ರದರ್ಶಿಸಲು ಪ್ರತಿಯೊಬ್ಬ ನಾಗರೀಕನು ಪ್ರಗತಿ ಸಾಧಿಸಬೇಕಾದ ಅಗತ್ಯವಿದೆ ಎಂದರು.

ADVERTISEMENT

ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ್ರಮೋದ್‌ ದುಂಡುಗ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ಪ್ರಧಾನ ಸೇವಕ ಎಂದು ಸಂಬೋಧಿಸಿಕೊಂಡಿದ್ದು, ನಾವೆಲ್ಲರೂ ಸೇವಕರಾದರೆ ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಆದ್ದರಿಂದ ದೇಶದ ಪ್ರತಿಯೊಬ್ಬರೂ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಲೇಬೇಕು. ಪ್ರತಿಯೊಬ್ಬರಲ್ಲೂ ದೇಶಾಭಿಮಾನ, ದೇಶ ಜಾಗೃತಿ ಮೈಗೂಡಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ. ರತನ್‌ ಮಾತನಾಡಿ, ಜನ್ಮ ದಿನಾಚರಣೆಗಳನ್ನು ಆಚರಣೆಗೆ ಸೀಮಿತಗೊಳಿಸಿಕೊಳ್ಳದೇ, ಜನ್ಮ ದಿನಾಚರಣೆ ಮೂಲಕ, ಸಮಾಜ ಉಪಯೋಗಿ ಕಾರ್ಯಗಳನ್ನು ನಡೆಸಬೇಕು. ಸಾರ್ವಜನಿಕ ಆಸ್ತಿಗಳನ್ನು ಸಮಾಜ ಉಪಯೋಗಿಯಾಗಬೇಕಾದರೆ ಅದನ್ನು ಸ್ವಂತ ಆಸ್ತಿಯಂತೆ ಕಾಪಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಣಕಲ್‌ಶ್ಯಾಮಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾರಮೇಶ್‌, ವಕ್ತಾರ ಹಳೇಕೋಟೆವಿನಯ್‌, ಕಣಚೂರುವಿನೋದ್‌ಕುಮಾರ್‌, ಮನೋಜ್‌, ಚಂದ್ರು, ನಿತಿನ್‌, ಸುದೀಪ್‌, ಬಿ.ಎಂ. ರಾಮಕೃಷ್ಣ, ಜಿ.ಬಿ. ಧರ್ಮಪಾಲ್‌, ಲತಾಲಕ್ಷ್ಮಣ್‌ಶೆಟ್ಟಿ, ರಘು, ಪ್ರವೀಣ್‌ಪೂಜಾರಿ, ಪರೀಕ್ಷಿತ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.