ಚಿಕ್ಕಮಗಳೂರು: ಮನೋರಂಜನೆಯ ನೆಪದಲ್ಲಿ ದೃಶ್ಯ ಮಾಧ್ಯಮ ಜನತೆಯನ್ನು ದಾರಿ ತಪ್ಪಿಸುತ್ತಿದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಸದಸ್ಯ ಅಬ್ದುಲ್ ರೆಹಮಾನ್ ಪಾಶಾ ವಿಷಾದಿಸಿದರು.
ನಗರದ ಸವೂರ್ ಸಭಾಂಗಣದಲ್ಲಿ ಬೆಳ್ಳಿ ಮಂಡಲದ ಪ್ರಥಮ ಕಾರ್ಯಕ್ರಮ ವನ್ನು ನಗರದಲ್ಲಿ ಇತ್ತೀಚಿಗೆ ಉದ್ಘಾಟಿಸಿ ಮಾತನಾಡಿದರು.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಗೊಳುವ ದೃಶ್ಯಗಳು ಕೂಡ ರಂಜನೀಯವಾಗಿ ವ್ಯಾಪಾರಿ ಮನೋಭಾವದಿಂದ ಬಿತ್ತರಗೊಳ್ಳುತ್ತಿವೆ. ಜಾಗತೀಕ ಪರಿಣಾಮದಿಂದಾಗಿ ದೃಶ್ಯ ಮಾಧ್ಯಮ ದಿಕ್ಕು ತಪ್ಪುತ್ತಿದೆ ಎಂದರು.
ಚಲಿಸುವ ದೃಶ್ಯ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳು ಸಾಂಸ್ಕೃತಿಕ ದಿವಾಳಿಗೆ ದಾರಿ ಮಾಡಿದೆ. ಎಲ್ಲವನ್ನು ಒಪ್ಪಿಕೊಳ್ಳುವಂತಹ ಪರಿಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಚಲನಚಿತ್ರ ಹಾಗೂ ದೃಶ್ಯ ಮಾಧ್ಯಮ ಅತ್ಯಂತ ಪ್ರಭಾವ ಶಾಲಿಯಾಗಿದೆ. ಈ ಮಾಧ್ಯಮವು ಸಮಾಜದ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಪೂರಕವಾಗಿ ದ್ದಾಗ ಅದು ತನ್ನ ಶ್ರೇಷ್ಠತೆ ಉಳಿಸಿಕೊಳ್ಳುತ್ತದೆ ಎಂದ ಬೆಳ್ಳಿಮಂಡಲದ ಮಾಜಿ ಸಂಚಾಲಕ ಡಿ.ಎಚ್. ನಟರಾಜ್, ಶಾಲಾ, ಕಾಲೇಜುಗಳಲ್ಲಿ ಚಿತ್ರಕೂಟ ರಚಿಸಿ, ಶಿಬಿರ ಏರ್ಪಡಿಸಲಾಗುವುದು. ಜತೆಗೆ ಸೃಜನಶೀಲ ಚಲನಚಿತ್ರಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗುವುದು ಎಂದರು.
ಸಂಚಾಲಕ ಬಿ.ಎನ್.ಜ್ವಾಲನಪ್ಪ, ಸಹ ಸಂಚಾಲಕಿ ಪದ್ಮ ಶಿವಶಂಕರ್, ಖಜಾಂಚಿ ದಿನೇಶ್ ಪಟವರ್ಧನ್ ಇನ್ನಿತರರು ಉಪಸ್ಥಿತರಿದ್ದರು. ಪ್ರೆಂಚ್ ಭಾಷೆಯ ಮೂರು ಚಿತ್ರಗಳ ಪ್ರದರ್ಶನ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.