ADVERTISEMENT

ಹಲವರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಕರಕುಚ್ಚಿ ತಾಂಡಾದಲ್ಲಿ ಕಲುಷಿತ ನೀರು ಸೇವನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 12:08 IST
Last Updated 19 ಜೂನ್ 2018, 12:08 IST
ಕಲುಷಿತ ನೀರು ಸೇವನೆಯಿಂದಾಗಿ ಸಾರ್ವಜನಿಕರು ಅಸ್ವಸ್ಥರಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವುದು
ಕಲುಷಿತ ನೀರು ಸೇವನೆಯಿಂದಾಗಿ ಸಾರ್ವಜನಿಕರು ಅಸ್ವಸ್ಥರಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವುದು   

ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ಕರಕುಚ್ಚಿ ತಾಂಡಾದಲ್ಲಿ ಕಲುಷಿತ ನೀರು ಸೇವಿಸಿ ಮಕ್ಕಳು, ವೃದ್ಧರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ವಾಂತಿ ಹಾಗೂ ಭೇದಿ ಕಂಡು ಬಂದಿದ್ದರಿಂದ ಹಲವು ಮಂದಿ ಭಾನುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೆಲವರನ್ನು ಸೋಮವಾರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯ ಡಾ.ದೇವರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿ, ‘ಕಲುಷಿತ ನೀರು ಸೇವಿಸಿದ್ದರಿಂದ ವೃದ್ಧರಲ್ಲಿ ವಯೋ ಸಹಜವಾಗಿ ಕಂಡು ಬರುವ ರೋಗ ಲಕ್ಷಣ ಕಂಡು ಬಂದಿದೆ. ಎಲ್ಲ ರೋಗಿಗಳು ಚೇತರಿಸಿ ಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಕಲುಷಿತ ನೀರು: ಗ್ರಾಮದ ಪ್ರಾಥಮಿಕ ಶಾಲೆಯ ಬಳಿ ಇರುವ ಶೌಚಾಲಯದಿಂದ ಕಶ್ಮಲ ಹೊರಬರುತ್ತಿದೆ. ಅಲ್ಲೇ ಇರುವ ನೀರು ಪೂರೈಕೆಯ ಪೈಪ್‌ ಒಡೆದಿದ್ದು, ಅದಕ್ಕೆ ಕಲ್ಮಶ ಸೇರಿ ನೀರು ಕಲುಷಿತಗೊಂಡಿದೆ. ಅದನ್ನು ಸಮರ್ಪಕ ನಿರ್ವಹಣೆ ಮಾಡುವಲ್ಲಿ ಪಂಚಾಯಿತಿ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನೆ ನಡೆದು ಮೂರು ದಿನಗಳಾದರೂ ಯಾವುದೇ ಜನಪ್ರತಿನಿಧಿಗಳು ಭೇಟಿ ನೀಡದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುದ್ಧ ನೀರು ಪೂರೈಕೆ ಮಾಡದ ಕಾರಣ ಸಮಸ್ಯೆ ಉಲ್ಬಣವಾಗಿದೆ ಎಂದು ಸುಧಾ ಪತ್ರಿಕೆಗೆ ತಿಳಿಸಿದ್ದಾರೆ.

‘ಕರಕುಚ್ಚಿ ಎ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವು ಇದ್ದು, ತಾಂಡದಲ್ಲಿ ಘಟಕ ಅನುಷ್ಠಾನದ ಕಾಮಗಾರಿ ನಡೆಯುತ್ತಿದೆ. ಗ್ರಾಮದಲ್ಲಿ ಇತ್ತೀಚೆಗೆ ಬಿದ್ದ ಸತತ ಮಳೆಯಿಂದಾಗಿ ನೀರು ಇಂಗುಗುಂಡಿಯ ಮುಖಾಂತರ ಒಡೆದು ಹೋಗಿದ್ದ, ಕಲ್ಮಶ ಪೈಪ್‌ಲೈನ್ ನಲ್ಲಿ ಸೇರಿರಬಹುದು ಎಂದು ಪಿಡಿಒ ಅವಿನಾಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.