ಚಿಕ್ಕಮಗಳೂರು: ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ವೇಳೆ ಮತ ಸೆಳೆಯಲು ಕುಂಕುಮ, ಬಳೆ, ಸೀರೆ, ಕುಪ್ಪಸದ ಆಮಿಷ ತೋರಿಸಲು ಬಂದರೆ ಮಹಿಳೆಯರು ಅವರಿಗೆ ಪೊರಕೆ ಸೇವೆ ಮಾಡಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ ಕರೆ ನೀಡಿದರು.
ನಗರದಲ್ಲಿ ಭಾನುವಾರ ಸಿಪಿಐ ಹಮ್ಮಿಕೊಂಡಿದ್ದ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಹಿಳೆಯರಿಗೆ ಸೀರೆ, ಕುಪ್ಪಸ ತಂದುಕೊಡುವುದು ಅವರ ಕೈಹಿಡಿದ ಪತಿಯರ ಕರ್ತವ್ಯ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ ಸೆಳೆಯಲು ಸೀರೆ, ಕುಪ್ಪಸದ ಆಮಿಷವೊಡ್ಡುವುದು ಮಹಿಳೆಯರ ಸ್ವಾಭಿಮಾನಕ್ಕೆ ಕುಂದು ತಂದಂತೆ. ಮಹಿಳೆಯರು ಜಾಗ್ರತರಾಗಿ, ತಮ್ಮ ಸ್ವಾಭಿಮಾನಕ್ಕೆ ಯಾವುದೇ ಪಕ್ಷಗಳು ಧಕ್ಕೆ ತರುವ ಪ್ರಯತ್ನ ನಡೆಸಿದರೆ ಪಾಠ ಕಲಿಸಬೇಕು ಎಂದರು.
ಯಾವುದೇ ಸರ್ಕಾರಗಳು ಮಹಿಳೆಯರನ್ನು ‘ಪುರುಷರ ಯಶಸ್ಸಿನ ಹಿಂದೆ ಮಹಿಳೆ ಇದ್ದಾಳೆ’ ಎಂದು ಬಣ್ಣಿಸುತ್ತಾ ಕಾಲ ದೂಡುತ್ತಿವೆಯೇ ಹೊರತು ಮಹಿಳೆಯರಿಗೆ ಅಗತ್ಯ ಸವಲತ್ತು ಒದಗಿಸಿ ಅವರನ್ನು ಸ್ವಾವಲಂಬಿಗೊಳಿಸಲು ಪ್ರಯತ್ನಿಸುತ್ತಿಲ್ಲ ಎಂದು ವಿಷಾದಿಸಿದರು.
ಲೋಕಸಭಾ ಕ್ಷೇತ್ರದ ಸಿಪಿಐ ಅಭ್ಯರ್ಥಿ ವಿಜಯ್ಕುಮಾರ್ ಮಾತನಾಡಿ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರ ಸಂಘಟನೆ ಹುಟ್ಟಿ 12 ವರ್ಷ ಕಳೆದಿವೆ. ಇವರ ಸಮಸ್ಯೆಗೆ ಈವರೆಗೆ ಹಲವು ಹೋರಾಟಗಳನ್ನು ಪಕ್ಷ ನಡೆಸಿದ್ದು, ಸಾಕಷ್ಟು ಯಶಸ್ಸು ಪಡೆದಿದ್ದೇವೆ. ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರ ಇಡೀ ಕುಟುಂಬಗಳು ಬೆಂಬಲಿಸಿದರೆ ಸಾಕು ಈ ಚುನಾವಣೆಯಲ್ಲಿ ಗೆಲುವು ಸುಲಭ ಎಂದರು.
ಅರಣ್ಯವಾಸಿಗಳ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯವರು ಬಂದೂಕು ಹಿಡಿದು ಬಲಪ್ರಯೋಗಕ್ಕೆ ಬಂದಾಗ ಮೊದಲ ಬಾರಿಗೆ ಪಕ್ಷ ಬಿ.ಕೆ.ಸುಂದರೇಶ್ ನೇತೃತ್ವದಲ್ಲಿ ಹೋರಾಟ ನಡೆಸಿ ಅರಣ್ಯವಾಸಿಗಳ ಬೆಂಬಲಕ್ಕೆ ನಿಂತಿತು. ನಗರದಲ್ಲಿ ತಲೆ ಎತ್ತಿರುವ ದಿಢೀರ್ ನಗರ, ಶಾಂತಿನಗರದಲ್ಲಿ ಬಡವರು ನೆಲೆ ಕಳೆದುಕೊಳ್ಳಲು ಪಕ್ಷದ ಹೋರಾಟವೇ ಮುಖ್ಯ ಕಾರಣ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷ ಹಲವು ಜನಪರ ಹೋರಾಟಗಳನ್ನು ನಡೆಸಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಜನತೆ ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು, ಮುಖಂಡರಾದ ರಘು, ಶಿವಕುಮಾರ್, ಇಂದುಮತಿ ಇನ್ನಿತರರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.