ಬಾಳೆಹೊನ್ನೂರು: ಇದೇ 7ರಂದು ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿಣಿ ನಡೆಯಲಿದೆ. ವೀರಶೈವ– ಲಿಂಗಾಯತ ಸಮುದಾಯದ ಗುರು ವಿರಕ್ತ ಮಠಾಧೀಶರು ಮತ್ತೊಮ್ಮೆ ಒಟ್ಟು ಸೇರಿ, ಸಮಾಲೋಚಿಸಿ ನೀತಿ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
‘ವೀರಶೈವ– ಲಿಂಗಾಯತ ಧರ್ಮದ ಕುರಿತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಡಿ. 30ರಂದು ಚರ್ಚೆ ನಡೆಸಲು ನಿರ್ಧರಿಸಿ, ನಂತರ ಬದಲಾವಣೆ ಮಾಡಿರುವುದು ಸಮಾಜಕ್ಕೆ ನೋವು ತಂದಿದೆ. ಜನವರಿ ಅಂತ್ಯದಲ್ಲಿ ಮತ್ತೆ ವೀರಶೈವ ಲಿಂಗಾಯತ ಧರ್ಮದ ವಿಚಾರವಾಗಿ ‘ಸತ್ಯ ದರ್ಶನ’ ಕಾರ್ಯಕ್ರಮ ನಡೆಸಲು ಅವರು ಉದ್ದೇಶಿಸಿದ್ದು, ಪತ್ರಿಕೆಗಳ ಮೂಲಕ ತಿಳಿದಿದೆ ಎಂದಿದ್ದಾರೆ.
ಈ ಬಗ್ಗೆ ಸ್ವತಂತ್ರ ಲಿಂಗಾಯತ ಧರ್ಮದ ಯಾವುದೇ ಪ್ರತಿನಿಧಿಗಳು ವೀರಶೈವ ಪಂಚಪೀಠಗಳನ್ನಾಗಲಿ, ಹೊಸಪೇಟೆ, ಮುಂಡರಗಿ ವಿರಕ್ತ ಮಠಾಧೀಶರನ್ನಾಗಲಿ ಸಂಪರ್ಕಿಸಿಲ್ಲ. ಏಕಾಏಕಿ ಕೆಲವು ಮಠಾಧೀಶರ ಕುಮ್ಮಕ್ಕಿನಿಂದ ಆತುರಾತುರವಾಗಿ ಚರ್ಚೆಗೆ ಅವಕಾಶ ಕೊಟ್ಟಿರುವುದು ಒಳ್ಳೆಯದಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.