ADVERTISEMENT

ಸ್ನೇಹಸಂಗಮದಲ್ಲಿ ಶಾಲಾಭಿವೃದ್ಧಿಗೆ ಕೊಡುಗೆ

ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ; ಸರ್ಕಾರಿ ಪಿಯು ಕಾಲೇಜಿನ ಮೇಲ್ಛಾವಣಿ ದುರಸ್ತಿ ಮಾಡಿದವರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:24 IST
Last Updated 17 ಆಗಸ್ಟ್ 2025, 7:24 IST

ಆಲ್ದೂರು: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ 1999ನೇ ಸಾಲಿನ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಈಚೆಗೆ ಆಯೋಜಿಸಿದರು. ಬೇರೆ ಜಿಲ್ಲೆ, ಹೊರರಾಜ್ಯ ಮತ್ತು ದುಬೈಯಲ್ಲಿರುವ ಹಳೆಯ ವಿದ್ಯಾರ್ಥಿಗಳು ಒಟ್ಟುಸೇರಿದರು.

ಸ್ನೇಹ ಸಂಗಮದ ಅಂಗವಾಗಿ ಪ್ರಾಥಮಿಕ ಕನ್ನಡ ಶಾಲೆಗೆ ಗ್ರೈಂಡರ್, ಮಿಕ್ಸರ್ ಮತ್ತು ಉರ್ದು–ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ 180 ಸ್ವೆಟರ್, 200 ವಿದ್ಯಾರ್ಥಿಗಳಿಗೆ ತಲಾ 12 ನೋಟ್ ಪುಸ್ತಕ, ಪ್ರೌಢಶಾಲೆಗೆ 12 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.

ಹಳೆಯ ವಿದ್ಯಾರ್ಥಿ ಚಂದ್ರಶೇಖರ್ ಮಾತನಾಡಿ ವಿದ್ಯಾರ್ಥಿ ಸಂಘದಲ್ಲಿ ಒಟ್ಟು 52 ಮಂದಿ ಇದ್ದು ಅಂದಾಜು ₹2 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದು ಕಳೆದ ವರ್ಷ ಇಲೆಕ್ಟ್ರಾನಿಕ್ ಉಪಕರಣಗಳನ್ನು ನೀಡಲಾಗಿತ್ತು ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಬಿಲ್ ಕಲೆಕ್ಟರ್ ಸಂಘದ ಅಧ್ಯಕ್ಷ ನಾರಾಯಣ್, ಶಿಕ್ಷಕರ ನಿಸ್ವಾರ್ಥ ಸೇವೆಯಿಂದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಗಿದೆ ಎಂದರು.

ಬೆಂಗಳೂರು ಉತ್ತರದ ಉಪ ಪೊಲೀಸ್ ಆಯುಕ್ತ ಸಜಿತ್ ಕುಮಾರ್, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜ್ಞಾನವನ್ನು ಗಳಿಸುವುದಕ್ಕಾಗಿ ಇಂಗ್ಲಿಷ್‌ ಕಲಿಯುವ ರೂಢಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಯು ಇಬ್ರಾಹಿಂ ಮಾತನಾಡಿ ಕಲಿತ ಶಾಲೆಯ ಸಬಲೀಕರಣ ಮಾಡಿದರೆ ಗ್ರಾಮೀಣ ಶಾಲಾ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚುತ್ತದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ರವಿಕುಮಾರ್ ಎಚ್.ಎಲ್ ಮತ್ತು ಮುಖ್ಯ ಶಿಕ್ಷಕ ಸುರೇಶ್ ಸಿ.ಎಸ್ ಮಾತನಾಡಿದರು.

ಸರ್ಕಾರಿ ಪಿಯು ಕಾಲೇಜಿನ ಮೇಲ್ಛಾವಣಿ ದುರಸ್ತಿ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರಾದ ಓಂಕಾರಪ್ಪ, ಲಲಿತಮ್ಮ, ರತ್ನಮ್ಮ, ಪಾರ್ವತಮ್ಮ, ಹರಿಣಾಕ್ಷಿ, ಟಿ.ಟಿ ರತ್ನಮ್ಮ, ದೊಡ್ಡಮ್ಮ, ತಬಸುಂ ಅವರನ್ನು ಗೌರವಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.