ಹೇಮಾವತಿ ನದಿಯಲ್ಲಿ ಸತ್ತು ತೇಲುತ್ತಿರುವ ಮೀನು
ಮೂಡಿಗೆರೆ: ತಾಲ್ಲೂಕಿನ ಬಣಕಲ್ ಪಟ್ಟಣ ಬಳಿಯ ಹೇಮಾವತಿ ನದಿಯಲ್ಲಿ ನೂರಾರು ಮೀನುಗಳು ಸಾವನ್ನಪ್ಪಿದ್ದು, ತೀರದಲ್ಲಿ ತೇಲುತ್ತಿದ ದೃಶ್ಯ ಗುರುವಾರ ಕಂಡು ಬಂದಿತು.
ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಮೀನು ಹಿಡಿಯುವುದಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಡಿಕೆ ಬೆಳೆಗೆ ಬಳಸುವ ರಾಸಾಯನಿಕ ಪದಾರ್ಥವಾದ ಮೈಲುತುತ್ತವನ್ನು ನದಿಯಲ್ಲಿ ಮಿಶ್ರಣ ಮಾಡಿರುವ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಮಲೆನಾಡಿಗರ ಪಾಲಿನ ಜೀವನದಿಯಾಗಿರುವ ಹೇಮಾವತಿ ನದಿಯ ನೀರು ಕಲುಷಿತಗೊಂಡಿರುವ ಅನುಮಾನ ವ್ಯಕ್ತವಾಗಿದ್ದು, ಈ ನೀರನ್ನು ಕುಡಿಯಲು ಬಳಸುವ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನರು ಆತಂಕಗೊಂಡಿದ್ದಾರೆ. ನದಿ ಕಲುಷಿತಗೊಳಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಜಾವಳಿಯಲ್ಲಿ ಹುಟ್ಟಿರುವ ಹೇಮಾವತಿಯ ನೀರು ಮೂಡಿಗೆರೆ ಮೂಲಕ ಹಾಸನ ಜಿಲ್ಲೆಯ ಗೊರೂರಿನ ಡ್ಯಾಂಗೆ ಸೇರ್ಪಡೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.