ADVERTISEMENT

ಚಿಕ್ಕಮಗಳೂರು | ಬೆಂದ ಕಾಡು: ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ಕಾಫಿನಾಡು

ಕಾಳ್ಗಿಚ್ಚಿಗೆ ಸಿಲುಕಿ ಕಪ್ಪು ಬಣ್ಣಕ್ಕೆ ತಿರುಗಿದ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ; ರೆಸಾರ್ಟ್‌, ಹೋಂಸ್ಟೆ, ಹೋಟೆಲ್‌ಗಳು ಖಾಲಿ

ವಿಜಯಕುಮಾರ್ ಎಸ್.ಕೆ.
Published 10 ಮಾರ್ಚ್ 2025, 8:13 IST
Last Updated 10 ಮಾರ್ಚ್ 2025, 8:13 IST

ಚಿಕ್ಕಮಗಳೂರು: ಬೇಸಿಗೆಯ ಬಿಸಿಲಿನ ನಡುವೆ ಕಾಫಿನಾಡಿನಲ್ಲಿ ಹಸಿರು ಮಾಯವಾಗಿದೆ. ಪರಿಸರ ಪ್ರವಾಸಿ ತಾಣಗಳು ಬರಡು ನೆಲಗಳಾಗಿವೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಭಾಗವಂತೂ ಕಾಳ್ಗಿಚ್ಚಿಗೆ ಸಿಲುಕಿ ಕಪ್ಪು ಬಣ್ಣಕ್ಕೆ ತಿರುಗಿವೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕಡಿಮೆಯಾಗಿದೆ. 

ಚಿಕ್ಕಮಗಳೂರು ಪ್ರವಾಸ ಎಂದರೆ ಸುಂದರ ಪರಿಸರ ತಾಣ ಎಂದುಕೊಂಡೇ ಪ್ರವಾಸಿಗರು ಭೇಟಿ ನೀಡುತ್ತಾರೆ. ಕಾಳ್ಗಿಚ್ಚಿನ ಆರ್ಭಟಕ್ಕೆ ಪ್ರಮುಖ ಪ್ರವಾಸಿ ತಾಣಗಳ ಹುಲ್ಲುಗಾವಲು ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಹಸಿರ ಕಣಜವಾಗಿದ್ದ ಗುಡ್ಡಗಾಡುಗಳು ಈಗ ಕಪ್ಪು ಕಣಗಳವಾಗಿ ಮಾರ್ಪಟ್ಟಿವೆ.

ಬಿಸಿಲಿನ ತಾಪ ತಣಿಸಿಕೊಳ್ಳಲು ಮಲೆನಾಡಿನತ್ತ ಮುಖ ಮಾಡುವ ಪ್ರವಾಸಿಗರಿಗೆ ಇದು ಬೇಸರ ತರಿಸಿದೆ. ಕಾಳ್ಗಿಚ್ಚಿನಲ್ಲಿ ಬೆಂದಿರುವ ಗುಡ್ಡಗಳನ್ನು ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಾಳ್ಗಿಚ್ಚಿಗೆ ಸಿಲುಕದ ಗುಡ್ಡಗಳಿಗೆ ಭೇಟಿ ನೀಡಲು ಕೆಲವೆಡೆ ಅರಣ್ಯ ಇಲಾಖೆ ನಿಷೇಧಿಸಿದೆ. ಪ್ರವಾಸಿ 

ADVERTISEMENT

ಇದರ ಅರಿವಿಲ್ಲದೆ ಬರುವ ಪ್ರವಾಸಿಗರು ಬೇಸರದಿಂದ ವಾಪಸ್ ಹೋಗುತ್ತಿದ್ದಾರೆ. ಕಾಳ್ಗಿಚ್ಚಿನ ಆತಂಕದಲ್ಲಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ಹಲವು ಗುಡ್ಡಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇದರಿಂದ ಸ್ಥಳೀಯ ವಹಿವಾಟು ಕುಸಿತ ಕಂಡಿದೆ. ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ, ಝರಿಫಾಲ್ಸ್, ಮಾಣಿಕ್ಯಧಾರ ಜಲಪತಾ, ಬಾಬಾಬುಡನ್‌ಗಿರಿಯಲ್ಲಿ ಭಾನುವಾರವೂ ಬೆರಳೆಣಿಕೆಯಷ್ಟು ಪ್ರವಾಸಿಗರು ಕಾಣಿಸಿದರು.

ರೆಸಾರ್ಟ್‌, ಹೋಂಸ್ಟೆ, ಹೋಟೆಲ್‌ಗಳು ಖಾಲಿ ಹೊಡೆಯುತ್ತಿವೆ. ಪ್ರವಾಸಿ ತಾಣಗಳಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ಜನರೇ ಇಲ್ಲವಾಗಿದೆ. ಪ್ರವಾಸಿಗರನ್ನೇ ನಂಬಿರುವ ಟ್ಯಾಕ್ಸಿ, ಜೀಪ್ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.