ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದು, ಬಿಡುವಿನ ನಡುವೆ ಆಗಾಗ ಮಳೆ ಸುರಿಯಿತು.
ಚಿಕ್ಕಮಗಳೂರು ನಗರದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಸುರಿದ ಮಳೆ ಮಧ್ಯಾಹ್ನದ ತನಕ ಸುರಿಯಿತು. ಸಂಜೆ ನಂತರ ಮತ್ತೆ ಆರಂಭವಾಗಿ ಸುರಿಯಿತು.
ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣದ ಜತೆಗೆ ಚಳಿ ಗಾಳಿ ಬೀಸುತ್ತಿದ್ದು, ಜನರನ್ನು ಹೈರಾಣು ಮಾಡಿದೆ. ಬೆಳಗ್ಗೆಯಿಂದಲೇ ಮಳೆ ಸುರಿದಿದ್ದರಿಂದ ಎಪಿಎಂಸಿಯಲ್ಲಿ ವ್ಯಾಪಾರ ವಹಿವಾಟಿಗೆ ಅಡ್ಡಿಯಾಯಿತು.
ತುಂಗಾ, ಭದ್ರಾ, ಹೇಮಾವತಿ ನದಿಗಳ ಹರಿವಿನಲ್ಲಿ ಹೆಚ್ಚಳವಾಗಿದೆ. ನದಿ ತೀರದ ಪ್ರದೇಶಗಳಿಗೆ ಹೋಗದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಪ್ರವಾಸಿತಾಣಗಳಲ್ಲಿ ಪೊಲೀಸ್ ಕಣ್ಘಾವಲು: ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಪೊಲೀಸ್ ನಿಗಾ ಇಟ್ಟಿದೆ. ಚಾರ್ಮಾಡಿ ಘಾಟಿಯಲ್ಲಿನ ಜಲಪಾತಗಳು ಮಳೆಯಿಂದಾಗಿ ಮೈದುಂಬಿದ್ದು, ಪ್ರವಾಸಿಗರು ಜಾರುವ ಜಲಪಾತಗಳ ಬಂಡೆಗಳ ಮೇಲೆ ಏರಿ ಮೋಜು ಮಾಡುತ್ತಿರುವುದು ವರದಿಯಾದ ಕೂಡಲೇ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
ಹುಚ್ಚಾಟ ನಡೆಸಿದ ನಾಲ್ವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ಪೊಲೀಸ್ ನಿಯೋಜನೆ ಮಾಡುವ ಜತೆಗೆ ಬ್ಯಾರಿಕೇಡ್ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಅಲ್ಲಲ್ಲಿ ಹಾನಿ
ಕಳಸ: ತಾಲ್ಲೂಕಿನಾದ್ಯಂತ ಮಳೆಯ ಆರ್ಭಟ ಮಂಗಳವಾರವೂ ಮುಂದುವರಿದಿದೆ.
ಮಧ್ಯಾಹ್ನ ಕೆಲ ಹೊತ್ತು ಮಳೆ ನಿಂತು ಬಿಸಿಲು ಕಂಡಾಗ ಜನರು, ಮಳೆ ಕಡಿಮೆ ಆಯಿತೆಂದುಕೊಂಡಿದ್ದರು. ಆದರೆ ಸಂಜೆ ಮತ್ತೆ ಧಾರಾಕಾರ ಮಳೆ ಸುರಿಯಿತು. ಅವಧಿಗೆ ಮುನ್ನವೇ ಸುರಿಯುತ್ತಿರುವ ಮಳೆ ಕೃಷಿಕರಲ್ಲಿ ಆತಂಕ ಮೂಡಿಸಿದೆ. ಕಾಫಿ, ಅಡಿಕೆ ತೋಟಗಳಲ್ಲಿ ಮುಂಗಾರು ಪೂರ್ವ ಕೆಲಸ ಇನ್ನೂ ಮುಗಿದಿಲ್ಲ. ಕೃಷಿಕರು ಮಳೆಗಾಲಕ್ಕೆ ಸೌದೆ ಮಾಡಿಕೊಳ್ಳಲು ಇನ್ನಷ್ಟು ಸಮಯಾವಕಾಶ ಬೇಕಿತ್ತು.
ಭದ್ರಾ ನದಿ ಮತ್ತು ಉಪನದಿಗಳು ಉಕ್ಕಿ ಹರಿಯುತ್ತಿವೆ. ಕುದುರೆಮುಖ ಸಮೀಪದ ಜಾಬಳೆಯಲ್ಲಿ ಭದ್ರಾ ನದಿ ನೀರಿನ ಹರಿವಿನಿಂದ ರಾಮಚಂದ್ರ ಎಂಬುವರ ಮನೆಯ ಹಿಂಭಾಗದ ಧರೆ ಕುಸಿದಿದೆ. ಅವರ ಮನೆಗೆ ಕೂಡ ಅಪಾಯವಾಗುವ ಆತಂಕ ಇದೆ. ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳಸ- ಕುದುರೆಮುಖ, ಕಳಸ- ಕೊಟ್ಟಿಗೆಹಾರ, ಕಳಸ- ಬಾಳೆಹೊನ್ನೂರು, ಕಳಸ- ಹೊರನಾಡು ರಸ್ತೆಗಳ ಪಕ್ಕ ಸರಿಯಾದ ಚರಂಡಿ ಇಲ್ಲದೆ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆಗಳಿಗೆ ಈ ಮಳೆಯು ಹಾನಿ ತರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ವಿದ್ಯುತ್ ಸಮಸ್ಯೆ
ಕೊಪ್ಪ: ಪಟ್ಟಣ ಒಳಗೊಂಡಂತೆ ತಾಲ್ಲೂಕಿನಲ್ಲಿ ಮಂಗಳವಾರ ಬಿರುಸಿನ ಮಳೆಯಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಸೋಮವಾರ ಸುರಿದ ಮಳೆಗೆ ಹರಿಹರಪುರ ಹೋಬಳಿ ಹೆಗ್ಗಾರು ಗ್ರಾಮದ ಬೆಳ್ಳಾಲೆ ನಿವಾಸಿ ಪ್ರವೀಣ ಅವರ ಜಮೀನಿನಲ್ಲಿ ಕೆಲವು ಅಡಿಕೆ ಮರಗಳು ಧರೆಗುರುಳಿವೆ. ಹಳ್ಳಕ್ಕೆ ನಿರ್ಮಿಸಿರುವ ತಡೆಗೋಡೆಗೆ ಹಾನಿಯಾಗಿದೆ.
ಕಸಬಾ ಹೋಬಳಿ ಬಿಂತ್ರವಳ್ಳಿ ಜೋಗಿಸರ ನಿವಾಸಿ ಕೇಶವ ಅವರ ಮನೆ ಬಳಿ ತಡೆಗೋಡೆ ಕುಸಿದಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಜನರು ವಿದ್ಯುತ್ ಹಾಗೂ ಮೊಬೈಲ್ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆ ಬಿಡುವು ನೀಡಬಹುದು ಎಂದು ಅಂದಾಜಿಸಿ ಉರುವಲು (ಕಟ್ಟಿಗೆ) ಸಿದ್ಧತೆ ಮಾಡಿಕೊಳ್ಳದವರು ಸಮಸ್ಯೆ ಎದುರಿಸುವಂತಾಗಿದೆ.
ಮನೆಗೆ ಹಾನಿ: ಗೃಹಿಣಿಗೆ ಗಾಯ
ಆಲ್ದೂರು: ಸತತ ಮಳೆಯಿಂದ ಸಮೀಪದ ವಸ್ತಾರೆ ಹೋಬಳಿ ಮೈಲಿಮನೆ ಗ್ರಾಮದ ನಿವಾಸಿ ನಂದಿನಿ ದಿನೇಶ್ ಎಂಬುವರ ಮನೆಗೆ ಹಾನಿಯಾಗಿದೆ. ಚಾವಣಿ ಮತ್ತು ಗೋಡೆ ಕುಸಿದಿದ್ದು ಮನೆಯೊಳಗಿದ್ದ ಗೃಹಿಣಿ ನಂದಿನಿ ಅವರಿಗೆ ಗಾಯಗಳಾಗಿವೆ. ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಡಿಒ ಫರೀದಾ ಬಾನು ಬಿಲ್ ಕಲೆಕ್ಟರ್ ಪ್ರವೀಣ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.